ನವದೆಹಲಿ: ಪದ್ಮಾವತ್ ಚಿತ್ರ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರೆದಿದ್ದು, ಸಿನಿಮಾ ನೋಡಿದ ರಜಪೂತರು ಈ ಹಿಂದೆ ಪದ್ಮಾವತಿ ಸಿನಿಮಾವನ್ನು ವಿರೋಧಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ತಾವೂ ಸಹ ರಜಪೂತ ನಾಯಕರೊಂದಿಗೆ ಪದ್ಮಾವತ್ ಸಿನಿಮಾ ವೀಕ್ಷಿಸಿದ್ದು ಸಿನಿಮಾದಲ್ಲಿ ಅಂತಹ ಆಕ್ಷೇಪಾರ್ಹ ಸಂಗತಿಗಳಿಲ್ಲ, ತಾವೂ ಓರ್ವ ರಜಪೂತನಾಗಿದ್ದು ಈ ಹಿಂದೆ ಸಿನಿಮಾವನ್ನು ವಿರೋಧಿಸಿದ್ದ ರಜಪೂತರೆಲ್ಲಾ ಸಿನಿಮಾ ನೋಡಿದ ಬಳಿಕ ತಮ್ಮ ಬಗ್ಗೆ ತಾವೇ ಅಸಮಾಧಾನ ಹೊಂದಿದ್ದಾರೆ ಎಂದು ಮನೋಷ್ ಸಿಸೋಡಿಯಾ ತಿಳಿಸಿದ್ದಾರೆ.
ನಾನೂ ರಜಪೂತರೊಂದಿಗೆ ಸಿನಿಮಾ ನೋಡಿದೆ, ನನ್ನನ್ನು ಬಿಡಿ, ಅದನ್ನು ವಿರೋಧಿಸುತ್ತಿದ್ದ ಜನರೇ ವಿರೋಧಿಸಿದ್ದಕ್ಕಾಗಿ ಈಗ ಬೇಸರಪಟ್ಟುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಕರಣಿ ಸೇನಾ ಸೇರಿದಂತೆ ಹಲವು ರಜಪೂತ ಸಂಘಟನೆಗಳು ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ, ಈ ಚಿತ್ರ ರಜಪೂತರ ಘನತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದವು.