ಬೆಂಗಳೂರು: ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಬಿಡುಗಡೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಇದೀಗ ವಿವಾದ ಸಂಬಂಧ ಕ್ಷಮೆ ಯಾಚಿಸಿದ್ಜಾರೆ.
ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಬಿಡುಗಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದ ನಟ ಸ್ಟೈಲ್ ರಾಜಾ ಚಿತ್ರದ ನಾಯಕ ನಟ ಗಿರೀಶ್ ಇದೀಗ ತಮ್ಮ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದಾರೆ. ಇನ್ನು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಟ ಗಿರೀಶ್ ಮಾತನಾಡಿ, ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಬಿಡುಗಡೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತಾಕಿತ್ತಿದ್ದರೆ ಈ ಚಿತ್ರ ಬಿಡುಗಡೆ ತಡೆಯಿರಿ. ಕರ್ನಾಟಕದಲ್ಲಿರುವ ರಜನಿಕಾಂತ್ ಅಭಿಮಾನಿಗಳು ಈ ಚಿತ್ರವನ್ನು ನೋಡುತ್ತಾರೆ ಎಂದು ಹೇಳಿ ವಿಡಿಯೋ ಅಪ್ಲೋಡ್ ಮಾಡಿದ್ದರು.
ಗಿರೀಶ್ ಅವರ ಈ ಹೇಳಿಕೆ ವೈರಲ್ ಆಗಿ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಗಿರೀಶ್, ಈ ಹಿಂದೆಯೂ ಕೂಡ ಬಾಹುಬಲಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಬಳಿಕ ಬಿಡುಗಡೆಗೆ ಅವಕಾಶ ಮಾಡಿಕೊಡಲಾಯಿತು. ಈಗಲೂ ಹಾಗೆ ಆಗಬಾರದು ಎಂಬ ಉದ್ದೇಶದಿಂದಲೇ ಕನ್ನಡಿಗರನ್ನು ಕೆಣಕುವ ವಿಡಿಯೋ ಮಾಡಿ ಹಾಕಿದೆ. ಕಾವೇರಿ ವಿಚಾರವಾಗಿ ನಾನೂ ಕೂಡ ಓರ್ವ ಹೋರಾಟಗಾರನೇ.. ಕಾವೇರಿ ಕುರಿತು ಮಾತನಾಡಿದ ರಜನಿಕಾಂತ್ ಅವರ ಕಾಳಾ ಚಿತ್ರ ಬಿಡುಗಡೆ ಆಗಬಾರದು ಎಂಬ ಉದ್ದೇಶದಿಂದ ಈ ವಿಡಿಯೋ ಹಾಕಿದೆ. ನನ್ನ ವಿಡಿಯೋದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಾನು ತಪ್ಪು ಮಾಡಿಲ್ಲ. ಆದರೂ ನನ್ನ ಮಾತಿನಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಗೆಳಯರೇ.. ಇದು ನನ್ನ ಹೋರಾಟದ ಸ್ಟೈಲ್ ಅಷ್ಟೇ ಎಂದು ಗಿರೀಶ್ ಹೇಳಿದ್ದಾರೆ.
ನಟ ಗಿರೀಶ್ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಂತೆಯೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿ ಕಚೇರಿಗೆ ಆಗಮಿಸಿದ್ದ ನಟ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ್ದರು. ಅಲ್ಲದೆ ಕನ್ನಡಿಗರ ಕ್ಷಮೆ ಕೋರಿ ಪತ್ರ ಕೂಡ ಸಲ್ಲಿಕೆ ಮಾಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos