ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

'ಕಾವೇರಿ' ಕುರಿತ ರಜನಿಕಾಂತ್ ಹೇಳಿಕೆ ನೋವು ತಂದಿದೆ, ಕಾಳಾ ಚಿತ್ರದ ನಿಷೇಧ ಸರಿಯಲ್ಲ: ಪ್ರಕಾಶ್ ರೈ

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೇಳಿಕೆ ನನಗೂ ನೋವು ತಂದಿದೆ. ಆದರೆ ಇದಕ್ಕಾಗಿ ಅವರ ಕಾಳಾ ಚಿತ್ರ ನಿಷೇಧ ಮಾಡುವುದು ಸರಿಯಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೇಳಿಕೆ ನನಗೂ ನೋವು ತಂದಿದೆ. ಆದರೆ ಇದಕ್ಕಾಗಿ ಅವರ ಕಾಳಾ ಚಿತ್ರ ನಿಷೇಧ ಮಾಡುವುದು ಸರಿಯಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಜನಿಕಾಂತ್ ನಟನೆಯ 'ಕಾಲಾ' ಸಿನಿಮಾಕ್ಕೂ ಕಾವೇರಿ ವಿವಾದಕ್ಕೂ ಏನು ಸಂಬಂಧ..? ಕಾವೇರಿ ವಿಚಾರವನ್ನು ಮುಂದಿಟ್ಟುಕೊಂಡು 'ಕಾಲಾ' ಸಿನಿಮಾ ಬಿಡುಗಡೆಗೆ ವಿಧಿಸಿರುವ ನಿರ್ಬಂಧ ಸರಿಯಲ್ಲ. ಸಿನಿಮಾ ಕಲಾವಿದರನ್ನು ಏಕೆ ಯಾವಾಗಲೂ ಗುರಿಯಾಗಿಸಿಕೊಳ್ಳಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಚಿತ್ರದ ಮೇಲಿನ ನಿಷೇಧ ಹೇರಿದ ಮಾತ್ರಕ್ಕೆ ಸಮಸ್ಯೆ ಇತ್ಯರ್ಥವಾಗುತ್ತದೆಯೇ..?, ನಾವು ಕನ್ನಡಿಗರು ಇದನ್ನೇ ಬಯಸುತ್ತಿದ್ದೇವೆಯೇ..? ಕಾಳಾ ಚಿತ್ರವನ್ನು ನೋಡಬಾರದು ಎಂದು ಕನ್ನಡಿಗರು ನಿರ್ಧರಿಸಿದರೆ ಅದು ಅವರ ನಿರ್ಣಯ. ಆದರೆ ಚಿತ್ರದ ಮೇಲಿನ ನಿಷೇಧ ಸರಿಯಲ್ಲ. ಈ ವಿವಾದದ ಕುರಿತು ಬಹುತೇಕ ಕನ್ನಡಿಗರಿಗೆ ಅರಿವೇ ಇಲ್ಲ. ಹೀಗಿದ್ದು ಕೆಲವರು ಮಾತ್ರ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಕಾಶ್ ರೈ ಆರೋಪಿಸಿದ್ದಾರೆ. 
ಅಂತೆಯೇ 'ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಿಸುತ್ತದೆಯೋ ಅಥವಾ ಕೇಂದ್ರದಲ್ಲಿ ಬಿಜೆಪಿ ಮಾಡಿದಂತೆ ಪದ್ಮಾವತ್ ನಂತಹ ವಿವಾದ ಮರುಕಳಿಸಲು ಆಸ್ಪದ ನೀಡುತ್ತದೆಯೋ?.. ಜನ ಸಾಮಾನ್ಯನ ಹಕ್ಕಿನ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. 
ಕೆಲವರು ಮಾತ್ರ ಕನ್ನಡಿಗರಿಗೆ ಏನು ಬೇಕು, ಏನು ಬೇಡ ಎಂದು ನಿರ್ಧರಿಸುವುದು ಯಾವ ನ್ಯಾಯ? ನಟನೊಬ್ಬನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ನಿರ್ಮಾಪಕನ ಬಂಡವಾಳದ ಗತಿ ಏನಾಗಬೇಕು? ನೂರಾರು ತಂತ್ರಜ್ಞರ, ಸಹಕಲಾವಿದರ, ಸಾವಿರಾರು ಕಾರ್ಮಿಕರ ದುಡಿಮೆಯ, ಪ್ರತಿಭೆಯ ಫಲವೇನು ಎಂದು ಸಿನಿಮಾವನ್ನು ನೆಚ್ಚಿಕೊಂಡಿರುವ ಕಾರ್ಮಿಕರ ದುಡಿಮೆಯ ಕುರಿತು ಪ್ರಕಾಶ್ ರೈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಬಿಜೆಪಿಯು 'ಪದ್ಮಾವತ್' ಸಿನಿಮಾದಲ್ಲಿ ಮಾಡಿದಂತೆ ಜೆಡಿಎಸ್-ಕಾಂಗ್ರೆಸ್ ಸರ್ಕಾರವು ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವವರನ್ನು ಸುಮ್ಮನೆ ಬಿಡಲಿದೆಯೇ ಅಥವಾ ಸಾಮಾನ್ಯ ಜನರು ತಮ್ಮ ಆಯ್ಕೆಯ ಹಕ್ಕನ್ನು ಪಡೆದುಕೊಳ್ಳಬಹುದು ಎಂಬ ಭರವಸೆಯನ್ನು ನೀಡಲಿದೆಯೇ ಎಂದು ಪ್ರಶ್ನಿಸಿದ್ದಾರೆ. ಇವು ನನ್ನ ಅಂತಃಕರಣದ ಪ್ರಶ್ನೆಗಳು. ಈ ಪ್ರಶ್ನೆಗಳಿಗಾಗಿ ನನ್ನನ್ನು ಕೆಲವರು ಕನ್ನಡ ದ್ರೋಹಿ ಎಂದು ಪಟ್ಟಕಟ್ಟಿದರೂ ಆಶ್ಚರ್ಯ ಪಡಬೇಕಿಲ್ಲ. ಇತ್ತೀಚೆಗೆ ನಾನು ಪ್ರಶ್ನಿಸಿದ್ದಕ್ಕೆ ಹಿಂದೂ ದ್ರೋಹಿ, ದೇಶ ದ್ರೋಹಿ ಎಂದು ಪಟ್ಟಕಟ್ಟಿದ್ದವರನ್ನು ಕಂಡಿದ್ದೇವೆ. ಆದರೂ ಹೇಳಲೇಬೇಕಾದ್ದನ್ನು ಹೇಳಿಯೇ ತೀರಬೇಕು. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ರೈ ಹೇಳಿದ್ದಾರೆ.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿರುದ್ಧ ಹೇಳಿಕೆ ನೀಡಿರುವ ರಜನಿಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಿತ್ರರಂಗ, ಜೂನ್ 7ರಂದು ಬಿಡುಗಡೆಯಾಗಲಿರುವ 'ಕಾಲಾ' ಸಿನಿಮಾವನ್ನು ರಾಜ್ಯದಲ್ಲಿ ಪ್ರದರ್ಶನ ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT