ಬೆಂಗಳೂರು: ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿ ಸೇರಿದಂತೆ ಮೂವರನ್ನು ಶನಿವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ರೆಸ್ಟೋರೆಂಟ್ವೊಂದರಲ್ಲಿ ನಟ ಕಿಟ್ಟಿ ಮತ್ತಿತರರು, ಸಪ್ಲೈಯರ್ ಗಿರೀಶ್ ಎಂಬುವವರಿಗೆ ಗನ್ ತೋರಿಸಿ, ಬೆದರಿಸಿರುವುದಾಗಿ ಪ್ರಕರಣವೊಂದು ದಾಖಲಾಗಿತ್ತು. ಇದೀಗ ಅದೇ ಗಿರೀಶ್ ಎಂಬಾತನನ್ನು ಕಿಟ್ಟಿ ಮತ್ತು ತಂಡ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ಇಂದು ಕಾರ್ಯಾಚರಣೆ ನಡೆಸಿದ ಜ್ಞಾನಭಾರತಿ ಪೊಲೀಸರು ಸುನಾಮಿ ಕಿಟ್ಟಿ. ಅರ್ಜುನ್ ಮತ್ತು ಯೋಗೇಂದ್ರ ಎಂಬುವವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಗಿರೀಶ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಅಪಹರಣ ಹಾಗೂ ಹಲ್ಲೆಗೊಳಗಾದ ಕುಟೀರ ಪಾರ್ಕ್ ಲ್ಯಾಂಡ್ ಬಾರ್ನ ಸಪ್ಲೈಯರ್ ಗಿರೀಶ್, ಜ್ಞಾನಭಾರತಿ ಠಾಣೆಯಲ್ಲಿ ಸುನಾಮಿ ಕಿಟ್ಟಿ ಹಾಗೂ ತಂಡದ ವಿರುದ್ಧ ಐಪಿಸಿ ಸೆಕ್ಷನ್ 363,307, 397 506, 149ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಸುನಿಲ್ ಎಂಬುವರ ಪತ್ನಿ ತೌಸಿತ್ ಎಂಬುವವರೊಡನೆ ಮಾಳಗಾಳದ ಕುಟೀರ್ ಪಾರ್ಕ್ ರೆಸ್ಟೊರೆಂಟ್ ಗೆ ಊಟಕ್ಕೆ ಆಗಾಗ್ಗೆ ಹೋಗುತ್ತಿದ್ದರು. ಈ ಕುರಿತು ತೌಸಿತ್ ಯಾರು ಎಂಬುದನ್ನು ತಿಳಿದುಕೊಳ್ಳಲು ಫೆಬ್ರವರಿ 28ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನಾಮಿ ಕಿಟ್ಟಿ ಹಾಗೂ ತಂಡ ಕುಟೀರ ಪಾರ್ಕ್ ಲ್ಯಾಂಡ್ ಬಾರ್ ಗೆ ತೆರಳಿ ಅಲ್ಲಿನ ಬಾರ್ ಸಪ್ಲೈಯರ್ ಗಿರೀಶ್ ನನ್ನು ಅಪಹರಿಸಿ ಚಾಕುವಿನಿಂದ ಹಲ್ಲೆ ನಡೆಸಿ ತೌಸಿತ್ ನನ್ನು ತೋರಿಸುವಂತೆ ಒತ್ತಾಯ ಮಾಡಿದ್ದಾರೆ. ತೌಸಿತ್ ಗೆ ಕರೆ ಮಾಡಿ ಕರೆಸಿಕೊಳ್ಳುವಂತೆ ನನ್ನನ್ನು ಒತ್ತಾಯಿಸಿದರು. ತೌಸಿತ್ ಬಂದಮೇಲೆ ಇಬ್ಬರನ್ನೂ ಹೊರಮಾವು ಬಳಿಯಿರುವ ತೋಟದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿ, ವಿಷಯವನ್ನು ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಹಾಕಿ ನನ್ನನ್ನು ಬಿಟ್ಟರು ಎಂದು ದೂರುದಾರ ಗಿರೀಶ್ ಎಫ್ಐಆರ್ ಪ್ರತಿಯಲ್ಲಿ ತಿಳಿಸಿದ್ದಾರೆ.