ಸಿನಿಮಾ ಸುದ್ದಿ

ಮಾಸ್ತಿಗುಡಿ ನಟರ ದುರಂತ ಸಾವು: ದುನಿಯಾ ವಿಜಯ್ ವಿರುದ್ಧ ದೋಷಾರೋಪ ಪಟ್ಟಿ!

Raghavendra Adiga
ಬೆಂಗಳೂರು: ಸಂದಾರಿಕ ಕಲಹದಿಂದ ಪೋಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿ ಬೇಸತ್ತಿರುವ ನಟ ದುನಿಯಾ ವಿಜಯ್ ಅವರಿಗೆ ಇದೀಗ ಇನ್ನೊಂದು ಸಂಕಷ್ಟ ಎದುರಾಗಿದೆ. ವಿಜಯ್ ಅಭಿನಯದ "ಮಾಸ್ತಿಗುಡಿ" ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತಕ್ಕೀಡಾದ ಅನಿಲ್ ಹಾಗೂ ರಾಘವ್ ಉದಯ್ ಪ್ರಕರಣದ ಮುಖ್ಯ ಆರೋಪಿಗಳಿಗೆ ಸಹಾಯ ನೀಡಿದ ಕಾರಣ ನಟ ದುನಿಯಾ ವಿಜಯ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಾಗಿದೆ.
ನಟರ ಸಾವಿನ ಪ್ರಕರಣದಲ್ಲಿ ಚಿತ್ರ ನಿರ್ಮಾಪಕ ಸುಂದರ್‌ ಗೌಡ ಪರಾರಿಯಾಗಲು ವಿಜಯ್ ನೆರವಾಗಿದ್ದರೆಂದು ಆರೋಪಿಸಲಾಗಿದ್ದು ಇದಕ್ಕೆ ಸಂಬಂಧಿಸಿ ಬೆಂಗಳೂರು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು 65 ಪುಟದ ದೋಷಾರೋಪ ಪಟ್ಟಿಯನ್ನು ನಗರದ 2 ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದಾಗಲೇ "ಮಾಸ್ತಿಗುಡಿ" ಪ್ರಕರಣ ಸಂಬಂಧ ತಾವರೆಕೆರೆ  ಪೋಲೀಸರು ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಇದೀಗ ಮತ್ತೊಂದು ದೋಷಾರೋಪ ಪಟ್ಟಿಯೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಇದರಲ್ಲಿ ನಟ ದುನಿಯಾ ವಿಜಯ್ ಹಾಗೂ ಚಿತ್ರದ ನಿರ್ದೇಶಕ ನಾಗಶೇಖರ್, ಸುಂದರಗೌಡ, ಸಾಹಸ ನಿರ್ದೇಶಕ ರವಿವರ್ಮ, ಪೈಲಟ್  ಸೇರಿ ಆರು ಮಂದಿ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ. ಆದರೆ ತಾವರೆಕೆರೆ ಪೋಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ವಿಜಯ್ ಹೆಸರಿರಲಿಲ್ಲ. 
ಹಿಂದೆ ಸುಂದರ್ ಗೌಡ ಬಂಧನಕ್ಕೆ ತೆರಳಿದ್ದ ಪೋಲೀಸರ ಮೇಲೆ ದಬ್ಬಾಳಿಕೆ ನಡೆಸಿದ್ದು ಕೋರ್ಟ್ ಆದೇಶದ ವಿರುದ್ಧ ನಟನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲ ಕಾಲ ತಲೆಮರೆಸಿಕೊಂಡಿದ್ದ ವಿಜಯ್ ಬಳಿಕ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಪೋಲೀಸರು ಮತ್ತೆ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು ಮತ್ತೆ ನ್ಯಾಯಾಂಗ ಹೋರಾಟಕ್ಕೆ ವಿಜಯ್ ಸಜ್ಜಾಗಬೇಕಿದೆ
SCROLL FOR NEXT