ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ಕ್ಷಮೆ ಕೇಳುವುದು ಅವರ ದೊಡ್ಡತನದ ಲಕ್ಷಣ: ಪ್ರಕಾಶ್ ರೈ

Sumana Upadhyaya

ಬೆಂಗಳೂರು: ನಟಿ ಶ್ರುತಿ ಹರಿಹರನ್ ಬಹುಭಾಷಾ ಪ್ರತಿಭಾವಂತ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವುದು ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಹಲವರು ಸೇರಿದಂತೆ ಜನಸಾಮಾನ್ಯರು ಶ್ರುತಿ ಹರಿಹರನ್ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಿಗ್ಗಾಮುಗ್ಗ ಬೈಯುತ್ತಿದ್ದಾರೆ.

ಈ ಮಧ್ಯೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ನಟಿ ಶ್ರುತಿ ಹರಿಹರನ್ ಪರವಾಗಿ ನಿಂತಿದ್ದಾರೆ. ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಅರ್ಜುನ್ ಸರ್ಜಾ ಕೂಡ ಕನ್ನಡದ ಹೆಮ್ಮೆ. ಶ್ರುತಿ ಹರಿಹರನ್ ಪರವಾಗಿ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಅರ್ಜುನ್ ಸರ್ಜಾ ಅವರು ಹಿರಿಯ ನಟರು, ಆದರೆ ಇಲ್ಲಿ ನಾನು ಶ್ರುತಿ ಅವರ ಪರವಾಗಿ ನಿಲ್ಲುತ್ತೇನೆ, ಆ ಹೆಣ್ಣು ಅನುಭವಿಸಿದ ಅಸಹಾಯಕತೆ, ಅವಮಾನ, ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅರ್ಜುನ್ ಅವರು ಆರೋಪವನ್ನು ಅಲ್ಲಗಳೆದರೂ, ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ ಎಂದು ಪತ್ರಿಕೆಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಹೆಣ್ಣುಮಕ್ಕಳ ಮಿ ಟೂ ಅಭಿಯಾನ ಮುಂದಿನ ದಿನಗಳಲ್ಲಾದರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯಕ್ಕೆ, ಅವಮಾನಗಳಿಗೆ, ಅಸಹಾಯಕತೆಗೆ, ಕೊನೆಯನ್ನು ಕಾಣಲಿ ಎಂದು ಹೇಳಿದ್ದಾರೆ.

ಇನ್ನೊಂದೆಡೆ ನಟಿ ಶ್ರದ್ಧಾ ಶ್ರೀನಾಥ್  ಶ್ರುತಿ ಹರಿಹರನ್ ಗೆ ಬೆಂಬಲ ನೀಡಿದ್ದಲ್ಲದೆ ತಾವು ಎದುರಿಸಿದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಬಸ್ ಪ್ರಯಾಣಿಕನೊಬ್ಬನ ಅನುಚಿತ ವರ್ತನೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಹಿಂದೆ ನಾನು ಕೊಚ್ಚಿಗೆ ಹೋಗುವಾಗ ಗಾಢ ನಿದ್ರೆಯಲ್ಲಿದ್ದೆ. ಯಾರೋ ಮೈ ಮುಟ್ಟಿದ ಅನುಭವವಾಗಿ ಇದ್ದಕ್ಕಿದ್ದ ಹಾಗೆ ಎಚ್ಚರವಾಯ್ತು. ಸಹ ಪ್ರಯಾಣಿಕ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದನು. ಇದಕ್ಕೆಲ್ಲ ನನ್ನ ಬಳಿ ಸಾಕ್ಷಿ ಇಲ್ಲ. ಆದ್ರೆ ಇವೆಲ್ಲ ಕೆಟ್ಟ ನೆನಪುಗಳು ಎಂದು ನೋವು ತೋಡಿಕೊಂಡಿದ್ದಾರೆ.

ಆತ ನನ್ನ ತೊಡೆಯಲ್ಲಿ ಕೈ ಹಾಕಿದಾಗ ನಾನು ಸೆಲ್ಫಿ ತೆಗೆದುಕೊಳ್ಳಬೇಕಾಗಿತ್ತೋ ಏನೋ.. ನಿಮಗೆ ಎಲ್ಲದಕ್ಕೂ ಸಾಕ್ಷ್ಯ ಬೇಕಾ. ಈ ಹಿಂದೆ ನಾವಿಬ್ಬರು ಶೋನಲ್ಲಿ ಒಟ್ಟಿಗೆ ಪಾಲ್ಗೊಂಡಾಗ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ರು. ಆದ್ರೇ ಅಲ್ಲಿ ಆಕೆ ಯಾರ ಹೆಸರು ಪ್ರಸ್ತಾಪ ಮಾಡಿರಲಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.

SCROLL FOR NEXT