ಬೆಂಗಳೂರು: ಮೀ ಟೂ ಹೆಸರಿನಲ್ಲಿ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪ ಮಾಡಿಸುತ್ತಿರುವುದರ ಹಿಂದೆ ನಟ ಚೇತನ್ ಅವರ ದುರುದ್ದೇಶಪೂರಿತ ಸಂಚು ಅಡಗಿದೆ ಎಂದು ಉದ್ಯಮಿ ಹಾಗೂ ಸರ್ಜಾ ಅವರ ಆಪ್ತ ಪ್ರಶಾಂಕ್ ಸಂಬರಗಿಯವರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಜುನ್ ಸರ್ಜಾ ನಿರ್ದೇಶಿಸಿ, ನಿರ್ಮಾಣದಲ್ಲಿ ಮೂಡಿ ಬಂದಿದ್ದ ಪ್ರೇಮಬರಹ ಚಿತ್ರಕ್ಕೆ ಮೊದಲು ನಾಯಕರಾಗಿ ನಟ ಚೇತನ್ ಆಯ್ಕೆಯಾಗಿದ್ದರು. ಇದಕ್ಕೆ ಸರ್ಜಾ ಅವರಿಂದ ರೂ.10 ಲಕ್ಷವನ್ನು ಮುಂಗಡ ಪಡೆದಿದ್ದರು. ಆದರೆ, ನಂತರ ನಿರ್ದೇಶಕರಿಗೆ ಚೇತನ್ ಅವರ ನಟನೆ ಸೂಕ್ತವೆನಿಸಿರಲಿಲ್ಲ. ಹೀಗಾಗಿ ಚೇತನ್ ಅವರನ್ನು ಕೈಬಿಡಲಾಗಿತ್ತು.
ಬಳಿಕ ಸರ್ಜಾ ಹಣ ಕೇಳಿದಾಗ ಸಿನಿಮಾ ಅವಕಾಶ ಕೈತಪ್ಪಿದೆ. ನಿಮಗೆ ಸರಿಯಾದ ಪಾಠ ಕಲಿಸುತ್ತೇನೆಂದು ಬೆದರಿಕೆಯ ಸಂದೇಶವನ್ನು ಕಳುಹಿಸಿದ್ದರು. ಇದೇ ಶ್ರುತಿ ಮೀಟೂ ಆರೋಪ ಪದ ಹಿಂದೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಪ್ರತೀ ಟ್ವೀಟ್ ಲೈಕ್ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಅರ್ಜುನ್ ಸರ್ಜಾ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಈ ಬದಲಾವಣೆಯೇಕಾಯಿತು?. ನನಗೆ ಗೊತ್ತಿರುವ ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದ್ದ ಚೇತರನ್, ಶತ್ರುಗಳ ಶತ್ರು ಸ್ನೇಹಿತರಾಗುತ್ತಾರೆಂದು ಹೇಳಿದ್ದಾರೆ. ಹೀಗಾಗಿಯೇ ಅವರು ಶ್ರುತಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ನಾನು ಕೂಡ ಮಹಿಳಾಪರವಾದ ವ್ಯಕ್ತಿ. ಆದರೆ, ಶ್ರುತಿಯವರು ಪ್ರಚಾರಕ್ಕಾಗಿ ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆರೋಪಗಳಿಂದ ಅರ್ಜುನ್ ಸರ್ಜಾ ಅವರು ಖಿನ್ನತೆಗೊಳಗಾಗಿದ್ದಾರೆ. ಅವರ ಕುಟುಂಬದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಕೆಎಫ್'ಸಿಸಿ ಕಚೇರಿಗೆ ಎಂದಿಗೂ ಬಂದಿರಲಿಲ್ಲ. ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಬಂದಿದ್ದೆ. ಇಂದು ನಾನು ನನ್ನ ಗೆಳೆಯ ಅರ್ಜುನ್ ಗಾಗಿ ಇಲ್ಲಿಗೆ ಬಂದಿದ್ದೇನೆ. ಸತ್ಯವನ್ನು ಬಹಿರಂಗಪಡಿಸುವ ಸಲುವಾಗಿ ಬಂದಿದ್ದೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos