ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದ ಶೃತಿ ಹರಿಹರನ್ ತಮ್ಮ ದೂರಿನ ಪತ್ರದಲ್ಲಿ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದು ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಶೃತಿ ಹರಿಹರನ್ ಇಲ್ಲಿಯವರೆಗೂ ತಮಗೆ ಮದುವೆಯಾಗಿಲ್ಲ ಎಂದು ಹೇಳಿಕೊಂಡು ಬಂದಿದ್ದರು. ಆದರೆ ಇದೀಗ ದಿಢೀರ್ ಅಂತಾ ದೂರಿನ ಪತ್ರದಲ್ಲಿ ರಾಮ್ ಕುಮಾರ್ ಪತ್ನಿ ಎಂದು ನಮೂದಿಸಿದ್ದಾರೆ.
ರಾಮ್ ಕುಮಾರ್ ಕೇರಳದ ಪ್ರಸಿದ್ಧ ಕಲರಿ ಪಟ್ಟು ಎಂದು ತಿಳಿದು ಬಂದಿದೆ. ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಈ ಹಿಂದೆ ಶೃತಿ ಸಹ ರಾಮ್ ಕುಮಾರ್ ಜತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಶೃತಿ ಹೇಳಿರಲಿಲ್ಲ. ಆದರೆ ಇದೀಗ ದೂರಿನ ಪತ್ರದಲ್ಲಿ ವೈಫ್ ಆಫ್ ರಾಮ್ ಕುಮಾರ್ ಎಂದು ಬರೆದಿದ್ದಾರೆ.
ಮೀಟೂ ಆರೋಪ ಎದುರಿಸುತ್ತಿರುವ ನಟ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿದ್ದು, ಶೃತಿ ಹರಿಹರನ್ ರೊಂದಿಗೆ ತಾನು ಸಂಧಾನ ಮಾಡಿಸುತ್ತೇನೆ. ತನಗೆ 1.5 ಕೋಟಿ ರೂ ನೀಡಿ ಎಂದು ಬೇಡಿಕೆ ಇಟ್ಟಿದ್ದನಂತೆ. ಈ ಬಗ್ಗೆ ಸ್ವತಃ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ವೇಳೆ, 'ನಾನು ಶೃತಿ ಹರಿಹರನ್ ಆಪ್ತ ಎಂದು ಹೇಳಿಕೊಂಡ ರಾಮ್, ಆರೋಪವನ್ನು ಮುಚ್ಚಿಹಾಕಲು ಹಾಗೂ ಸಂಧಾನ ಮಾಡಿಕೊಳ್ಳಲು ನಮಗೆ 1.5 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಿದ್ದರು.
ಇದೀಗ ಶೃತಿ ಹರಿಹರನ್ ತಮ್ಮ ದೂರಿನಲ್ಲಿ ತನ್ನ ಗಂಡ ರಾಮ್ ಕುಮಾರ್ ಎಂದು ನಮೂದಿಸಿರುವುದು ಇದೀಗ ಸಂಧಾನಕ್ಕೆ ಮುಂದಾಗಿದ್ದ ಅಪರಿಚಿತ ವ್ಯಕ್ತಿ ಇತನೇ ಇರಬಹುದಾ ಎಂಬ ಅನುಮಾನಗಳನ್ನು ಮೂಡಿಸಿವೆ.