ಬೆಂಗಳೂರು: ಡಾ.ಶಿವರಾಜ್ ಕುಮಾರ್, ವಿವೇಕ್ ಒಬೆರಾಯ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ರುಸ್ತುಂ' ಮೇ ಅಂತ್ಯದೊಳಗೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಂತೆಯೇ ಚಿತ್ರದಲ್ಲಿರುವ'ಮುಜೆ ಅರೆಸ್ಟ್ ಬೋಲೇ ತೋ ಅಲರ್ಜಿ...ಎನ್ಕೌಂಟರ್ ಬೋಲೇ ತೋ ಎನರ್ಜಿ ಎಂಬ ಡೈಲಾಗ್ ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರುಸ್ತುಂ ಖ್ಯಾತ ನಿರ್ದೇಶಕ ರವಿ ವರ್ಮಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಇದು ಪಕ್ಕಾ ಕೌಟುಂಬಿಕ ಚಿತ್ರ ಎಂದು ನಿರ್ದೇಶಕ ರವಿವರ್ಮಾ ಹೇಳಿದ್ದಾರೆ. ಪ್ರಮುಖವಾಗಿ ಈ ಚಿತ್ರದ ಮೂಲಕ ಅಭಿಮಾನಿಗಳು ಹೊಸ ಬಗೆಯ ಶಿವರಾಜ್ ಕುಮಾರ್ ಅವರನ್ನು ನೋಡಲಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯ ಪಾತ್ರದಲ್ಲಿ ಯೂಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದು, ನಟಿ ಮಯೂರಿ ಹಾಗೂ ನಟಿ ರಚಿತಾರಾಮ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ರವಿವರ್ಮಾ, ಈ ಚಿತ್ರ ಕನ್ನಡದ ಎಲ್ಲ ನಿರ್ದೇಶಕರಿಗೆ, ತಂತ್ರಜ್ಞರಿಗೆ, ನಟರಿಗೆ ಮತ್ತು ಪ್ರೇಕ್ಷಕರಿಗೆ ಅರ್ಪಿಸುತ್ತಿದ್ದೇನೆ. ನಾನು ನನ್ನ ವೃತ್ತಿ ಜೀವನದಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದು ನನಗೆ ವಿಶೇಷ ಚಿತ್ರವಾಗಿದ್ದು, ನನ್ನ ಮೊದಲ ಪರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಚಿತ್ರ ರೀ-ರೆಕಾರ್ಡಿಂಗ್ ಹಂತದಲ್ಲಿದ್ದು, ಮೇ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಚಿತ್ರ ಕೆಲಸ ಮುಕ್ತಾಯವಾದ ಬಳಿಕ ಸೆನ್ಸಾರ್ ಬೋರ್ಡ್ ಗೆ ನೀಡಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಮೇ ತಿಂಗಳ ಮಧ್ಯಭಾಗದಲ್ಲಿ ಚಿತ್ರದ ಹಾಡುಗಳು ಬಿಡುಗಡೆ ಮಾಡಲು ಚಿತ್ರತಂಡ ತಯಾರಾಗಿದ್ದು, ಮೇ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆಗೆ ತಯಾರಿ ಸಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos