ಬೆಂಗಳೂರು: ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ವಾಣಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದೆಲ್ಲಾ ಮಾಧ್ಯಮಗಳಲ್ಲಿ ಹಬ್ಬಿದ ಸುದ್ದಿಗಳಿಗೆ ಇದೀಗ ಸ್ಪಷ್ಟಿಕರಣ ಸಿಕ್ಕಿದೆ.
ಕೆಲ ದಿನಗಳ ಹಿಂದೆ ವಾಣಿ ಹರಿಕೃಷ್ಣ ಅವರ ಫೇಸ್ಬುಕ್ ಪೋಸ್ಟ್ ಒಂದು ಗಾಂಧೀನಗರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೇ ವಿಚಾರವನ್ನು ಪ್ರಸ್ತಾಪಿಸಿ ಮಾಧ್ಯಮಗಳು ಹರಿಕೃಷ್ಣ ಮತ್ತು ವಾಣಿ ದಂಪತಿ ನಡುವೆ ಮನಸ್ಥಾಪ ಉಂಟಾಗಿದೆ ಎಂದು ವರದಿ ಮಾಡಿದ್ದವು. ಇದಕ್ಕೆ ನಿನ್ನೆ ಸ್ವತಃ ಹರಿಕೃಷ್ಣ ಅವರೇ ಸ್ಪಷ್ಟನೆ ನೀಡಿದ್ದರು.
ಈಗ ತಮ್ಮ ಫೇಸ್ಬುಕ್ ಪೋಸ್ಟ್ ಕುರಿತು ಎದ್ದಿದ್ದ ವದಂತಿಗೆ ವಾಣಿ ಹರಿಕೃಷ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸಂಸಾರ ಚೆನ್ನಾಗಿಯೇ ಇದೆ. ನಾನು ಮತ್ತು ನನ್ನ ಗಂಡ ಹರಿಕೃಷ್ಣ ಮಧ್ಯೆ ಯಾವುದೇ ಮನಸ್ಥಾಪ ಇಲ್ಲ. ನನ್ನ ಫೇಸ್ಬುಕ್ ಪೋಸ್ಟ್ ಕೇವಲ ಹಾಡಿಗೆ ಸಂಬಂಧಿಸಿದ್ದು ಅಷ್ಟೇ ಎಂದು ಹೇಳಿದ್ದಾರೆ.
ಕುರುಕ್ಷೇತ್ರ ಮತ್ತು ರಾಂಧವ ಚಿತ್ರಗಳಲ್ಲಿ ಮೊದಲು ನನ್ನನ್ನು ಹಾಡಿಸಲಾಗಿತ್ತು. ನಂತರ ಬೇರೆ ಗಾಯಕಿಯರಿಂದ ಹಾಡಿಸಿದ್ದಾರೆ. ಈ ಕಾರಣಕ್ಕೆ ನನಗೆ ಬಹಳ ಬೇಸರವಾಗಿದೆ. ನಾನು ಮಾಡಿರುವ ಫೇಸ್ಬುಕ್ ಪೋಸ್ಟ್ ಅದಕ್ಕೆ ಸಂಬಂಧಿಸಿದ್ದು ಅದನ್ನು ನೋಡಿದ ಯಾರಿಗಾದರೂ ಅದು ಅರಿವಾಗುವಂತಿದೆ ಎಂದು ಹೇಳಿದರು.