ಮಿನುಗುತಾರೆಯ ‘ಆತ್ಮ’ ಕತೆ 'ಕಲ್ಪನಾ ನಿವಾಸ'
ಬೆಂಗಳೂರು: ದಿಟ್ಟ ಅಭಿನಯ, ವಿಶಿಷ್ಟ ಸಂಭಾಷಣಾ ಶೈಲಿಯಿಂದ ಮಿನುಗುತಾರೆ ಎನಿಸಿಕೊಂಡ ನಟಿ ಕಲ್ಪನಾ ಮದುವೆ, ಮನೆ, ಗಂಡ, ಮಕ್ಕಳು ಎಂದು ತಾನು ಕಂಡ ಕನಸು ನನಸಾಗುವ ಮೊದಲೇ ಇಹಲೋಕ ತ್ಯಜಿಸಿದ ನತದೃಷ್ಟೆ.
ಚಂದನವನಕ್ಕೆ ಕಾಲಿಟ್ಟ ನಂತರ ಕೆಲವೇ ಸಮಯದಲ್ಲಿ ಅತಿಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಸೂಪರ್ ಹಿಟ್ ಚಿತ್ರಗಳನ್ನು ನೀಡಿ, ವೈಯಕ್ತಿಕ ಕಾರಣಗಳಿಗಾಗಿ ಬೇಸತ್ತು ಗೋಟೂರು ಐಬಿಯಲ್ಲಿ ಆತ್ಮಹತ್ಯೆಗೆ ಶರಣಾದ ಕಲ್ಪನಾ, ಈಗಲೂ ಅತೃಪ್ತ ಆತ್ಮವಾಗಿ ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ನೋವು ಹೊರಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ‘ಕಲ್ಪನಾ ನಿವಾಸ’ ತೆರೆಗೆ ಬರಲು ಸಿದ್ಧವಾಗುತ್ತಿದೆ
ಕಲ್ಪನಾ ಸಾವಿನ ನಂತರ ಆ ಊರಿನ ಸುತ್ತಮುತ್ತಲು ಹರಿದಾಡುತ್ತಿರುವ ಕಲ್ಪನ ಭೂತದ ವಿಚಾರವನ್ನು ಹಾಗೂ ಆ ಊರಿನ ಜನಕ್ಕೆ ಈ ವಿಚಾರವಾಗಿ ಆದ ಅನುಭವವನ್ನು ಇಟ್ಟುಕೊಂಡು ಐಟಿ ಉದ್ಯೋಗಿಗಳು ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ಕಲ್ಪನಾ ಸಾವಿನ ನಂತರ ನಡೆದಿದೆ ಎನ್ನಲಾದ ಕತೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.
ಕಲ್ಪನಾ ಇಹಲೋಕ ತ್ಯಜಿಸಿ 40 ವರ್ಷಗಳೇ ಕಳೆದಿವೆ. ಆದರೂ ಸಹ ಅವರ ಆತ್ಮಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲವಂತೆ. ಅವರು ಸಾವನ್ನಪ್ಪಿದ ಗೋಟೂರು ಐಬಿಯಲ್ಲಿ ಇಂದಿಗೂ ಅಮಾವಾಸ್ಯೆ-ಹುಣ್ಣಿಮೆಯ ದಿನದಂದು ಕಲ್ಪನಾ ಪ್ರೇತಾತ್ಮ ಸುಳಿದಾಡುತ್ತಿದ್ದು, ಅಳುವ ಧ್ವನಿ ಹಾಗೂ ಗೆಜ್ಜೆ ಸಪ್ಪಳದಿಂದ ಅಲ್ಲಿನ ಸ್ಥಳೀಯರು ಕೇಳಿ ಬೆಚ್ಚಿಬಿದ್ದಿದ್ದಾರಂತೆ.
‘ಕಲ್ಪನಾ ನಿವಾಸ’ ಚಿತ್ರದಲ್ಲಿ ವೇದಾ ಮತ್ತು ಆಶಿಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದು, ಅಶೋಕ್ ಭಾರದ್ವಜ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಕಲ್ಪನಾ ನಿವಾಸ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos