ಸಿನಿಮಾ ಸುದ್ದಿ

ಸಂಜಯ್ ದತ್ ಬಳಿಕ ಇದೀಗ ಕನ್ನಡಕ್ಕೆ ಬಾಲಿವುಡ್ ಹಿರಿಯ ನಟ ಬೋಮನ್ ಇರಾನಿ ಎಂಟ್ರಿ!

Vishwanath S
ಕೆಜಿಎಫ್ ಹಾಗೂ ಯಜಮಾನ ಚಿತ್ರಗಳ ಕಲೆಕ್ಷನ್ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಇದೀಗ ಬಾಲಿವುಡ್ ನಟ-ನಟಿಯರು ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಅಭಿನಯಿಸಲು ಮನಸ್ಸು ಮಾಡುತ್ತಿದ್ದಾರೆ.
ಹೌದು, ಕೆಜಿಎಫ್ ಚಾಪ್ಟರ್ 2ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅಕ್ಷಯ್ ಕುಮರ್ ಸಹ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್ ನ ಖ್ಯಾತ ನಟ ಬೋಮನ್ ಇರಾನಿ ಅವರು ಯುವರತ್ನ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಹಾಗೂ ರಾಜಕುಮಾರದಂತ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದರಾಮ್ ಇದೀಗ ಮತ್ತೇ ಪುನೀತ್ ರಾಜಕುಮಾರ್ ಜತೆ ಯುವರತ್ನ ಚಿತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಸಂತೋಷ್ ಅವರು ಖ್ಯಾತ ಕಲಾವಿದರ ಆಯ್ಕೆಗೆ ಮುಂದಾಗಿದ್ದಾರೆ.
ಸದ್ಯ ಪುನೀತ್ ಗೆ ಜೋಡಿಯಾಗಿ ಸಯೇಶಾ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಇದೀಗ ಬಾಲಿವುಡ್ ನ ಹಿರಿಯ ನಟ ಬೋಮನ್ ಇರಾನಿ ಅವರನ್ನು ಕನ್ನಡಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದ್ದು ಹೊಂಬಾಳೆ ಫಿಲ್ಮಂ ನಿರ್ಮಾಪಕರು ಅದಾಗೇ ಬೋಮನ್ ಅವರನ್ನು ಸಂಪರ್ಕಿಸಿದ್ದು ಈ ಆಫರ್ ಗೆ ಅವರು ಓಕೆ ಅಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿ ನಡೆಯಲಿರುವ ಚಿತ್ರೀಕರಣದ ವೇಳೆ ಬೊಮ್ಮನ್ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಬೋಮನ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯಕ್ಕೆ ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಅವರು ಕಾಲೇಜ್ ಪ್ರಿನ್ಸಿಪಾಲ್ ಅಥವಾ ಪ್ರಾಧ್ಯಾಪಕರಾಗಿ ಕಾಣಿಸಿಕೊಳ್ಳಲುವ ಸೂಚನೆಗಳು ದಟ್ಟವಾಗಿವೆ.
ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಧನಂಜಯ್ ಹಾಗೂ ಅರುಣ್ ಗೌಡ ಚಿತ್ರಲ್ಲಿ ಅಭಿನಯಿಸುತ್ತಿದ್ದಾರೆ.
SCROLL FOR NEXT