ಸರ್ಕಾರಿ ಶಾಲೆ ದತ್ತು ಪಡೆದ ನಿರೂಪಕ ಅಕುಲ್ ಬಾಲಾಜಿ
ಬೆಂಗಳೂರು: ಇತ್ತೀಚೆಗೆ ತೆರೆಕಂಡು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದ ಕನ್ನಡ ಚಿತ್ರವೊಂದರಿಂದ ಸ್ಪೂರ್ತಿ ಪಡೆದ ಟಿವಿ ನಿರೂಪಕ ಅಕುಲ್ ಬಾಲಾಜಿ ಇದೀಗ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.
ಹೌದು.. ನಿರ್ದೇಶಕ ರಿಷಭ್ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾ ಅನೇಕರನ್ನು ಕನ್ನಡ ಶಾಲೆಯತ್ತ ತಿರುಗಿ ನೋಡುವಂತೆ ಮಾಡಿತ್ತು. ಅಂತೆಯೇ ರಿಷಬ್ ಶೆಟ್ಟಿ ಕೇವಲ ಸಿನಿಮಾಗೆ ಮಾತ್ರ ಸೀಮಿತವಾಗದೇ ಸಿನಿಮಾ ಬಳಿಕ ಆ ಹಳೆಯ ಶಾಲೆಯ ಜೀರ್ಣೋದ್ಧಾರ ಕೂಡ ಮಾಡಿಸಿದ್ದರು. ಇದು ಹಲವರಿಗೆ ಸ್ಪೂರ್ತಿ ನೀಡಿದ್ದು. ಈ ಪಟ್ಟಿಗೆ ಇದೀಗ ಖ್ಯಾತ ಕಿರುತೆರೆ ನಿರೂಪಕ, ನಟ ಅಕುಲ್ ಬಾಲಾಜಿ ಕೂಡ ಸೇರಿದ್ದಾರೆ.
ತಮ್ಮ ಮಾತಿನ ಮೋಡಿ ಮೂಲಕ ಪ್ರೇಕ್ಷಕರನ್ನು ರಂಜಿಸುವ ಅಕುಲ್ ಬಾಲಾಜಿ ಈಗ ಕನ್ನಡ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಒಂದೆಡೆ ಸರ್ಕಾರ ಸರ್ಕಾರಿ ಶಾಲೆಗಳ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯ. ಮತ್ತೊಂದೆಡೆ ಇಂತಹ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಕುಲ್ ಬಾಲಾಜಿ ತಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರೊಂದಿಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಗಟ್ಟಿ ನಿರ್ಧಾರ ಮಾಡಿದ್ದಾರೆ.
ಅದಕ್ಕಾಗಿ ನಗರದ ಹೊರವಲಯದಲ್ಲಿರುವ ಲಗುಮೇನಹಳ್ಳಿಯಲ್ಲಿರುವ ಶಾಲೆಯನ್ನು ದತ್ತು ಸ್ವೀಕರಿಸಿದ್ದು, ಈ ಶಾಲೆ ಅವರ ಮನೆಗೆ ಹತ್ತಿರದಲ್ಲೇ ಇರುವುದರಿಂದ ಈ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಂಡಿದ್ದಾರೆ. ಈ ಶಾಲೆಯಲ್ಲಿ ಸುಮಾರು 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ ಇಬ್ಬರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಓರ್ವ ಶಿಕ್ಷಕ ಇತ್ತೀಚೆಗೆ ವೈಯುಕ್ತಿಕ ಕಾರಣ ನೀಡಿ ರಾಜಿನಾಮೆ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ಅಕುಲ್ ಬಾಲಾಜಿ, ಸರ್ಕಾರಿ ಶಾಲೆಗಳು ಬೆಳೆಯಬೇಕು. ಇದೇ ಕಾರಣಕ್ಕೆ ನನ್ನಗೆ ಬಂದು ಹೋಗಲು ಅನುಕೂಲವಾಗುವಂತೆ ಇದ್ದ ಈ ಲಗುಮೇನಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆಯಲು ನಿರ್ಧರಿಸಿದೆ. ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಎಂದು ಸ್ಥಳೀಯರೇ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಈ ಶಾಲೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಅನಿಸಿತು. ಹೀಗಾಗಿ ಶಾಲೆಯಲ್ಲಿ ನೂತನ ಶೌಚಾಲಯ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಅಂತೆಯೇ ಮತ್ತೋರ್ವ ಶಿಕ್ಷಕರನ್ನು ನೇಮಿಸಲೂ ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos