ಬೆಂಗಳೂರು: ಹಿರಿಯ ರಂಗಕಲಾವಿದ, ನಾಟಕರಂಗದ ಮಾಣಿಕ್ಯ ಮಾಸ್ಟರ್ ಹಿರಣ್ಣಯ್ಯ ಇಂದು ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಿರಿಯ ನಟರು, ನಿರ್ಮಾಪಕರು ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಟ ದೇವರಾಜ್, ಮಂಡ್ಯ ರಮೇಶ್, ಕಿಚ್ಚ ಸುದೀಪ್, ಮಾಸ್ಟರ್ ಆನಂದ್ ಸೇರಿ ಹಲವರು ಹಿರಣ್ಣಯ್ಯ ನವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ನಟ ದೇವರಾಜ್ ಮಾತನಾಡಿ "ರಂಗಭೂಮಿ ಹಿರಿಯ ಕಲಾವಿದರು, ಕನ್ನಡ ಭಾಷೆ, ನಾಟಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ.ಹಲವು ಕಲಾವಿದರಿಗೆ ಬದುಕು ನೀಡಿದ ಕನ್ನಡ ಭಾಷೆ ಬಗೆಗೆ ಜಾಗೃತಿ ಮೂಡಿಸಿದ್ದ ಹಿರಣ್ಣಯ್ಯ ಇಂದು ನಮ್ಮೊಡನಿಲ್ಲ ಅವರ ನೆನಪು ಮಾತ್ರ ಸದಾ ಜತೆಗಿರಲಿದೆ" ಎಂದಿದ್ದಾರೆ.
ನಟ ಮಂಡ್ಯ ರಮೇಶ್ ಮಾತನಾಡಿ"ಹಿರಣ್ಣಯ್ಯ ತಮ್ಮ ನಾಟಕರಂಗವನ್ನೇ ಹೋರಾಟದ ಕ್ಷೇತ್ರವಾಗಿಸಿಕೊಂಡಿದ್ದರು" ಎಂದು ತಮ್ಮ ಹಾಗೂ ಅವರ ನಡುವಿನ ಎರಡು ದಶಕಗಳ ನೆನಪನ್ನು ಮೆಲುಕು ಹಾಕಿದ್ದಾರೆ.
"73 ಶಾಂತಿ ನಿವಾಸ ಚಿತ್ರದಲ್ಲಿ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದೆವು. ಅವರ ಪ್ರತಿಭೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆ, ಅವರು ನನ್ನ ಹೃದಯಕ್ಕೆ ಸದಾ ಹತ್ತಿರವಾಗಿದ್ದಾರೆ" ಕಿಚ್ಚ ಸುದೀಪ್ ಹೇಳಿದ್ದಾರೆ.
ಚಾಲೆಂಜಿಂಗ್ ಸ್ತಾರ್ ದರ್ಶನ್ "ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ರವರು ಇಂದು ವಿಧಿವಶರಾಗಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಡನೆ ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿರುತ್ತ" ಎಂದು ಟ್ವೀಟ್ ಮಾಡಿ ಹಿರಣ್ಣಯ್ಯನವರನ್ನು ಸ್ಮರಿಸಿದ್ದಾರೆ.
"ಅವರೊಬ್ಬ ಲೆಜೆಂಡ್, ಅವರ ನಿಧನ ನನಗೆ ತುಂಬಾ ಆಘಾತವಾಗಿದೆ. ಅವರು ನಮ್ಮೊಡನೆ ಬಹಳ ವಿಷಯ ಹಂಚಿಕೊಳ್ಳುತ್ತಿದ್ದರು" ಮಾಸ್ಟರ್ ಆನಂದ್ ಹೇಳಿದ್ದಾರೆ.
"ಮಾಸ್ಟರ್ ಹಿರಣ್ಣಯ್ಯ ಜೀವನದಲ್ಲಿ ಸಹ ಮಾಸ್ಟರ್ ಆಗಿದ್ದರು. ಅವರ ಮಾತು ನೇರವಾಗಿ ನಾಟುವಂತಿತ್ತು. ಮಾಸ್ಟರ್ ಆಗಿಯೇ ಸಮಾಜದ ಓರೆ, ಕೋರೆಯನ್ನು ತಿದ್ದುತ್ತಿದ್ದರು" ಎಂದು ನಟ ಶ್ರೀನಾಥ್ ಹಿರಣ್ಣಯ್ಯನವರನ್ನು ನೆನೆದಿದ್ದಾರೆ.
ನವರಸ ನಾಯಕ ಜಗ್ಗೇಶ್ ಸಹ ಹಿರಣ್ಣಯ್ಯನವರನ್ನು ನೆನೆದು "ಇಂದಿನ ಮೆಜಸ್ಟಿಕ್ ಬಸ್ನಿಲ್ದಾಣ ಅಂದು "ಹಿರಣಯ್ಯ ಮಿತ್ರಮಂಡಲಿ"ಬಿಡಾರ!ನನ್ನ 1976ರಲ್ಲಿ ಇವರ ನಾಟಕ ನೋಡಲು ಅಪ್ಪಅಮ್ಮನ ಜೊತೆ ಹೋಗುತ್ತಿದ್ದೆ!ನಮ್ಮ ಸೋದರಮಾವ ರಂಗನಟ Tmಭಧ್ರಾಚಲ ನಾಟಕದ ಟಿಕೆಟ್ ಕೊಡುತ್ತಿದ್ದರು!ಹಳ್ಳಿಯಂತಿದ್ದ ಆದಿನಗಳ ಬಾಲ್ಯ ನೆನಪಾಯಿತು! ಇವರ ದೇವದಾಸಿ ಚಿತ್ರದ ಹಾಡು ಹಾಡಿ 9ನೆ ತರಗತಿಯಲ್ಲಿ ಪಾರಿತೋಷಕಪಡೆದಿದ್ದೆ " ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos