7 ನಿರ್ದೇಶಕರು ಒಟ್ಟಿಗೆ ಸೇರಿ ನಿರ್ದೇಶಿಸಿರುವ ಕಥಾ ಸಂಗಮ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಒಂದೊಂದು ಚಿತ್ರಕ್ಕೂ ಬೇರೆ ಬೇರೆ ಕಲಾವಿದರು. ಹೀಗೆ ಸಪ್ತ ಕಥೆಗಳನ್ನು ಇಟ್ಟುಕೊಂಡು 'ಕಥಾ ಸಂಗಮ' ಸಿನಿಮಾ ಸಿದ್ಧವಾಗುತ್ತಿದೆ.
ಈ ಎಲ್ಲ ಸಿನಿಮಾಗಳ ನೇತೃತ್ವ ವಹಿಸಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. 1976ರಲ್ಲಿ ಪುಟ್ಟಣ್ಣ ಕಣಗಾಲ್ ಅವರು ಐದು ಕಥೆಗಳನ್ನು ಒಟ್ಟಾಗಿಸಿ 'ಕಥಾ ಸಂಗಮ' ಚಿತ್ರ ಮಾಡಿದ್ದರು. 43 ವರ್ಷಗಳ ನಂತರ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಪ್ರತಿ ಕಥೆಯೂ 20 ನಿಮಿಷ ಪ್ರದರ್ಶನವಾಗಲಿದೆ, ನಿರ್ದೇಶಕ ಕರಣ್ ಅನಂತ್ ನಿರ್ದೇಶನದ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಮತ್ತು ಸೌಮ್ಯ ನಟಿಸುತ್ತಿದ್ದರೆ, ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸುಮಂತ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಮಾನಸಿ ಸುಧೀರ್ ಮತ್ತು ಸುಹಾನ್ ಶೆಟ್ಟಿ ಮುಖ್ಯ ಕಲಾವಿದರು. ಮಿದುನ್ ಮುಕುಂದನ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ. ರಾಹುಲ್ ಪಿ.ಕೆ. ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಕಲಾವಿದರು. ಉದಿತ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಶಿಕುಮಾರ್ ಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಅಮೃತಾ ನಾಯಕ್ ನಟಿಸುತ್ತಿದ್ದಾರೆ. ಧೀರೇಂದ್ರ ದಾಸ್ ಅವರ ಸಂಗೀತ ಚಿತ್ರಕ್ಕಿದೆ. ಕಿರಣ್ ರಾಜ್ ನಿರ್ದೇಶನದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾದರೆ, ಹರಿಪ್ರಿಯಾ ನಾಯಕಿ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಚಿತ್ರದಲ್ಲಿ ಕಿಶೋರ್ ಮತ್ತು ಯಜ್ಞಾ ಶೆಟ್ಟಿ ಪ್ರಮುಖ ಪಾತ್ರ ಮಾಡಿದ್ದಾರೆ.
ಪ್ರತಿ ಕಥೆಯೂ ವಿಭಿನ್ನ, ಒಂದಕ್ಕೊಂದು ಸಂಬಂಧವಿಲ್ಲ, ಈ ಪ್ರಾಜೆಕ್ಟ್ ನನಗೆ ವಿಶೇಷ ಜವಾಬ್ದಾರಿ ನೀಡಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos