ಸಿನಿಮಾ ಸುದ್ದಿ

ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಬರಬೇಡಿ: ನಟ ದರ್ಶನ್  

Sumana Upadhyaya

ಬೆಂಗಳೂರು: ಸ್ಯಾಂಡಲ್ ವುಡ್  ಸ್ಟಾರ್ ವಾರ್ ಹೊಸತಲ್ಲ. ಸ್ಟಾರ್ ನಟರು ಸುಮ್ಮನಿದ್ದರೂ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ವಾಗ್ಯುದ್ಧ ನಡೆಸುವ ಪ್ರವೃತ್ತಿ ಇತ್ತೀಚೆಗೆ ತಾರಕಕ್ಕೇರುತ್ತಿದೆ.


ಒಂದು ಕಾಲದಲ್ಲಿ ಕುಚ್ಚಿಕು ಗೆಳೆಯರಂತೆ ಇದ್ದ ದರ್ಶನ್ ಮತ್ತು ಸುದೀಪ್ ಈಗ ಬದ್ಧ ವೈರಿಗಳು. ದಚ್ಚು-ಕಿಚ್ಚನ ಈ ಮುನಿಸು ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಆರೋಪ ಮಾಡುವುದು, ಬಾಯಿಗೆ ಬಂದಂತೆ ಕಮೆಂಟ್ ಮಾಡುವುದು ಹೆಚ್ಚಾಗುತ್ತಿದೆ. 


ಈ ಮಧ್ಯೆ ಮೊನ್ನೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ, ಪೈಲ್ವಾನ್ ಪೈರಸಿಯಾಗಿದೆ. ದರ್ಶನ್ ಅಭಿಮಾನಿಗಳೇ ಸಿನಿಮಾದ ಪೈರಸಿ ಮಾಡಿ ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಚ್ಚನ ಫ್ಯಾನ್ಸ್ ಆರೋಪ ಮಾಡಿದರು. 


ಈ ಆರೋಪ, ಪ್ರತ್ಯಾರೋಪ, ಕಿತ್ತಾಟಗಳು ಜೋರಾಗಿಯೇ ನಡೆಯುತ್ತಿದೆ. ಇನ್ನೊಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿರುವ ಕರ್ಮದ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.


ಇವೆಲ್ಲಕ್ಕೂ ಪೂರಕವೆಂಬಂತೆ ದರ್ಶನ್ ಇಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆಯನ್ನು ನೀಡಿ, ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು - ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

SCROLL FOR NEXT