ಸಿನಿಮಾ ಸುದ್ದಿ

'ನನ್ನ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಯಿತು, ಇದರಿಂದ ಅವಕಾಶ ಸಿಗುತ್ತಿರಲಿಲ್ಲ': ರಘು ದೀಕ್ಷಿತ್

Sumana Upadhyaya

ಬೆಂಗಳೂರು: ಬಾಲಿವುಡ್ ನಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಒಂದು ಗುಂಪು ಇದೆ, ಅದರಿಂದಾಗಿ ನನಗೆ ಅಲ್ಲಿ ಪ್ರಾಜೆಕ್ಟ್ ಗಳು ಕೈ ತಪ್ಪಿ ಹೋಗುತ್ತಿವೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಆರೋಪ ಮಾಡಿದ ನಂತರ ಕನ್ನಡ ಸಂಗೀತ ನಿರ್ದೇಶಕ,ಗಾಯಕ ರಘು ದೀಕ್ಷಿತ್ ಕೂಡ ಅಂತಹದ್ದೇ ಅನುಭವ ತಮಗೂ ಆಗಿದೆ ಎಂದಿದ್ದಾರೆ.

ಸೈಕೊ, ಜಸ್ಟ್ ಮಾತ್ ಮಾತಲ್ಲಿ ಮತ್ತು ತೀರಾ ಇತ್ತೀಚೆಗೆ ಲವ್ ಮಾಕ್ಟೇಲ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದವರು ರಘು ದೀಕ್ಷಿತ್. ಸೈಕೊ ಮತ್ತು ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳಿಗೆ ಮಾಡಿದ ಸಂಗೀತ ಜನಪ್ರಿಯವಾಗಿ ಒಳ್ಳೆ ಹೆಸರು ಗಳಿಸಿದ್ದರೂ ಸಹ ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸಿ, ನನ್ನ ವೃತ್ತಿಗೆ ಧಕ್ಕೆ ತರುವಂತಹ ವಿಷಯಗಳನ್ನು ಪ್ರಚಾರ ಮಾಡಿ 2009ರಿಂದ 2015ರವರೆಗೆ ನನಗೆ ಚಿತ್ರಗಳೇ ಸಿಗದಂತೆ ಆಯಿತು ಎಂದು ಕಹಿ ಅನುಭವಗಳನ್ನು ಹಂಚಿಕೊಂಡರು ರಘು ದೀಕ್ಷಿತ್.

ನನ್ನ ಬಗ್ಗೆ ಒಂದು ಉತ್ತಮ ಅಂಶ ಎಂದರೆ ನನಗೆ ಈ ಸುಳ್ಳು ವದಂತಿಗಳ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಕೆಟ್ಟ ಅಂಶವೆಂದರೆ ನನಗೆ ಏಕೆ ಅವಕಾಶಗಳು ಸಿಗುತ್ತಿಲ್ಲ ಎಂದು ತಿಳಿದುಕೊಳ್ಳಲು ನಾನು ಹೋಗಿರಲಿಲ್ಲ. ನನ್ನ ಕಠಿಣ ಶ್ರಮಗಳು,ಕೆಲಸಗಳನ್ನು ನಿಲ್ಲಿಸಬಹುದು ಆದರೆ ಒಬ್ಬ ಒಳ್ಳೆಯ ಮನುಷ್ಯನನ್ನು ಶಾಶ್ವತವಾಗಿ ತಳ್ಳಲು ಸಾಧ್ಯವಿಲ್ಲ, ಈಗ ನಾನು ಫೀನಿಕ್ಸ್ ನಂತೆ ಎದ್ದು ಬಂದಿದ್ದೇನೆ. ಪ್ರತಿಯೊಬ್ಬರಿಗೂ ಕತ್ತಲೆ ನಂತರ ಒಂದು ಬೆಳಕು ಬರುತ್ತದೆ ಎಂದು ಭಾವಿಸುತ್ತೇನೆ ಎನ್ನುತ್ತಾರೆ ರಘು ದೀಕ್ಷಿತ್.

ನಾನು ಈ ಹಿಂದೆ ನನ್ನ ಸಂದರ್ಶನಗಳಲ್ಲೆಲ್ಲಾ ನನಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದೆ. ಆದರೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸ್ವಜನಪಕ್ಷಪಾತ, ನೆಪೊಟಿಸಂ ಸುದ್ದಿಯಾಗುತ್ತಿದೆ ಎಂದ ಅವರು ಇದಕ್ಕೆಲ್ಲ ಕಾರಣವೇನಿರಬಹುದು ಎಂದು ಕೇಳಿದರೆ ವೃತ್ತಿ ವೈಷಮ್ಯ, ಸ್ಪರ್ಧೆ, ಪೈಪೋಟಿ ಎನ್ನುತ್ತಾರೆ.

ಕನ್ನಡ ಚಿತ್ರೋದ್ಯಮಕ್ಕೆ ನಾನು ಸಾಕಷ್ಟು ಕೊಡುಗೆ ನೀಡಬೇಕು. ಲವ್ ಮಾಕ್ ಟೇಲ್ ನನಗೆ ಮತ್ತೆ ಪುಟಿದೇಳಲು ಅವಕಾಶ ಕೊಟ್ಟಿದೆ. ಬೇರೆ ಚಿತ್ರರಂಗದಲ್ಲಿ ಕೆಲಸ ಸಿಕ್ಕಿದರೆ ಅಲ್ಲಿಗೆ ಕೂಡ ಹೋಗುತ್ತೇನೆ. ನನಗೆ ಉಳಿವಿನ ಪ್ರಶ್ನೆಯಿದೆ ಎನ್ನುವ ರಘು ದೀಕ್ಷಿತ್ ಅವರ ಬಳಿ ಈಗ ಏಳು ಚಿತ್ರಗಳು ಸಂಗೀತ ನಿರ್ದೇಶನಕ್ಕೆ ಇವೆಯಂತೆ.

SCROLL FOR NEXT