ಸಿನಿಮಾ ಸುದ್ದಿ

ಅಣ್ಣಾವ್ರು, ಬಿಗ್'ಬಿ ಬಳಸಿದ ಪಿಸ್ತೂಲ್ ಈಗ ಉಪ್ಪಿ ಕೈಯಲ್ಲಿ

Manjula VN

ಬೆಂಗಳೂರು: ಗಂಧದ ಗುಡಿಯಲ್ಲಿ ಡಾ. ರಾಜ್ ಕುಮಾರ್, ಶೋಲೇ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಿಡಿದಿದ್ದ ಪಿಸ್ತೂಲ್ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೈಯಿಗೆ ಬಂದಿದೆ. 

ಪ್ರೇಕ್ಷಕರಲ್ಲಿ ಈಗಾಗಲೇ ತೀವ್ರ ಸಂಚಲನ ಮೂಡಿಸಿರುವ ಕಬ್ಜ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಚಿತ್ರದಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಗಂಧದ ಗುಡಿ ಹಾಗೂ ಅಮಿತಾಭ್ ಬಚ್ಚನ್ ಅವರ ಶೋಲೆ ಚಿತ್ರದಲ್ಲಿ ಬಳಸಲಾಗಿದ್ದ ಪಿಸ್ತೂಲ್ ಹಿಡಿದು ಉಪೇಂದ್ರ ಅವರು ನಟಿಸಿದ್ದಾರೆ. 

ಈ ಕುರಿತಂತೆ ಸ್ವತಃ ಉಪೇಂದ್ರ ಅವರೇ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ. 

ಎರಡೂ ಕೈಯಲ್ಲಿ ಪಿಸ್ತೂಲುಗಳನ್ನು ಹಿಡಿದು ಮೂರು ವಿಭಿನ್ನ ಭಂಗಿಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಉಪೇಂದ್ರ ಅವರು ಶೇರ್ ಮಾಡಿದ್ದು, ಅಣ್ಣಾವ್ರು, ಅಮಿತಾಬ್ ಬಚ್ಚನ್ ರಂತಹ ಮೇರು ನಟರು ಗಂಧದ ಗುಡಿ, ಶೋಲೆ ಚಿತ್ರಗಳಲ್ಲಿ ಬಳಸಿದಂತಹ ಪಿಸ್ತೂಲನ್ನು ಕಬ್ಜ ಚಿತ್ರದ ಚಿತ್ರೀಕರಣದಲ್ಲಿ ಬಳಸಿದಾಗ ಆದ ರೋಮಾಂಚರ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ. 

ಕಬ್ಜ ಚಿತ್ರ ಉಪೇಂದ್ರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಚಿತ್ರದಲ್ಲಿ ಉಪೇಂದ್ರ ಅವರು ವಿಭಿನ್ನರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. 80ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದ್ದು, ಈ ಹಿಂದೆ 80 ದಶಕದ ಶೈಲಿಯಂತೆ ಅಂಗಿ ಹಾಗೂ ಬೆಲ್ ಬಾಟಂ ಪ್ಯಾಂಟ್ ಧರಿಸಿ, ಲಾಂಗ್ ಹಿಡಿದಿರುವ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆದಿದೆ. 

ಚಿತ್ರವೊಂದು ಪ್ಯಾನ್ ಇಂಡಿಯಾ ಸಿನಿವಾಗಿದ್ದು, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಲಂ, ಹಿಂದಿ, ಮರಾಠಿ ಹಾಗೂ ಬೆಂಗಾಲಿ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಅಲ್ಲದೆ ಚೀನಾದಲ್ಲಿಯೂ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಿ ಭಾಷೆಗೂ ಚಿತ್ರವನ್ನು ಡಬ್ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT