ಸಿನಿಮಾ ಸುದ್ದಿ

ರಿಯಾ, ರಾಗಿಣಿ, ಸಂಜನಾ ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಅಮಾಯಕರು: ನಟಿ ಪಾರುಲ್ ಯಾದವ್

Lingaraj Badiger

ಬೆಂಗಳೂರು: ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ವಿರಳವಾಗಿದ್ದರೂ, ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ಪ್ಯಾರ್ ಗೆ ಆಗ್ಬಿಟೈತಿ ಹಾಡು ಖ್ಯಾತಿಯ ನಟಿ ಪಾರುಲ್ ಯಾದವ್, ಇತ್ತೀಚೆಗೆ ಕೆಲ ಹೇಳಿಕೆಗಳನ್ನು ನೀಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಕೆಲ ವಿಚಾರಗಳನ್ನು ಯಾವುದೇ ಮುಲ್ಲಾಜಿಲ್ಲದೇ ಖಡಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.

ಮಾದಕ ವಸ್ತು ಸೇವನೆ ಎಂಬುದು ಗಂಭೀರ ಸಮಸ್ಯೆ ಎಂಬುದು ನನಗೆ ಗೊತ್ತು. ಈ ಪಿಡುಗನ್ನು ಬುಡ ಸಮೇತ ಕಿತ್ತುಹಾಕುವ ಎಲ್ಲಾ ರೀತಿಯ ಪ್ರಯತ್ನವೂ ನಡೆಯಬೇಕು. ಅಲ್ಲದೇ, ಈ ಮಾದಕ ಸೇವನೆಯನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಆದರೆ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಈ ಮೂವರು ಮಹಿಳೆಯರ ಮೇಲೆ ಕೇಂದ್ರೀಕರಿಸುತ್ತಿರುವುದರಲ್ಲಿ ಹೆಚ್ಚು ಅರ್ಥವಿದೆ ಎಂದು‌ ನನಗನಿಸುತ್ತಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ವಿಫಲ ಆಗಿದೆ. ಆರ್ಥಿಕತೆ ಹಳ್ಳ ಹಿಡಿದಿದೆ. ಅತ್ತ, ಚೀನಾದಿಂದ ಅಪಾಯ ಕೂಡ ಎದುರಾಗಿದೆ. ಈ ವಿಚಾರಗಳ ಮೇಲಿದ್ದ ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರಕ್ಕೆ ಇಂಥದ್ದೇನೋ ಬೇಕಾಗಿತ್ತು ಎಂದೆನಿಸುತ್ತದೆ' ಎಂದಿದ್ದಾರೆ ಪಾರುಲ್‌.

ರಾಗಿಣಿ ದ್ವಿವೇದಿ, ರಿಯಾ ಚಕ್ರವರ್ತಿ  ಮತ್ತು ಸಂಜನಾ ಗಲ್ರಾನಿಗೆ ಸಂಬಂಧಿಸಿದ ಕೆಲವು ಖಾಸಗಿ ವಿಡಿಯೋ ಮತ್ತು ಮಾಹಿತಿಯನ್ನು ಪೊಲೀಸರು ಲೀಕ್‌ ಮಾಡುತ್ತಿರುವುದು ಅಹಸ್ಯದ ಸಂಗತಿ. ತಪ್ಪು ಸಾಬೀತು ಆಗುವವರೆಗೂ ಅವರು ನಿರಪರಾಧಿಗಳು ಮತ್ತು ಅಮಾಯಕರು. ತನಿಖೆಯ ವಿಡಿಯೋಗಳು ಹರಿದಾಡುತ್ತಿರುವುದನ್ನು ನೋಡಲು ತುಂಬ ನೋವಾಗುತ್ತದೆ. ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ನ್ಯೂಸ್‌ ಚಾನೆಲ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರಾ? ಎಂದು ನಟಿ ಪ್ರಶ್ನಿಸಿದ್ದಾರೆ.

SCROLL FOR NEXT