ಸಿನಿಮಾ ಸುದ್ದಿ

ಆರ್ಯನ್ ಸಂತೋಷ್ ನಟನೆಯ 'ಡಿಯರ್ ಸತ್ಯ' ವಿವಿಧ ಭಾಷೆಗಳಲ್ಲಿ ಶೀಘ್ರವೇ ರಿಲೀಸ್

Shilpa D

ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ ‘ಡಿಯರ್ ಸತ್ಯ’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಆರ್ಯನ್ ಜನ್ಮದಿನದಂದೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ನಾಲ್ಕು ಹಾಡುಗಳು ರಿಲೀಸ್ ಆಗಿವೆ,

‘ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ‘ಕಲ್ಲರಳಿ ಹೂವಾಗಿ’ ಚಿತ್ರದ ಮೂಲಕ ಪೋಷಕ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ‘ನೂರುಜನ್ಮಕು’ ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದರು.

ಆರ್ಯನ್ ಪ್ರಕಾರ, ಡಿಯರ್ ಸತ್ಯ ಚಿತ್ರವು ಮೊದಲಿಗೆ ತಮಿಳಿನಲ್ಲಿ ಪ್ಯಾರಿಸ್ ಕಾರ್ನರ್ ಶೀರ್ಷಿಕೆಯಲ್ಲಿ ತಯಾರಾಗಿತ್ತು, ಮತ್ತು ತಂಡವು ಈ ವಿಷಯದೊಂದಿಗೆ ನಿರ್ದೇಶಕ ವೆಟ್ರಿಮಾರನ್ ಅವರನ್ನು ಸಂಪರ್ಕಿಸಿತು. "ನಂತರ ನಾವು ಅದನ್ನು ಕನ್ನಡ ಚಲನಚಿತ್ರವನ್ನಾಗಿ ಮಾಡುವ ಯೋಜನೆಯನ್ನು ಬದಲಾಯಿಸಿದ್ದೇವೆ, ನಂತರ ನಿರ್ದೇಶಕ ಶಿವ ಗಣೇಶ್ ಬಂದರು.

ಡಿಯರ್ ಸತ್ಯ ಸಿನಿಮಾ ಕತೆ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ ಮತ್ತು ದೆಹಲಿ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಸೂಕ್ಷ್ಮ ಪ್ರಕರಣಗಳಿಗೆ ನಿಕಟ ಸಂಬಂಧ ಹೊಂದಿದೆ ಎಂದು ಆರ್ಯನ್ ಹೇಳಿದ್ದಾರೆ.

‘ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ ‘ಭಿನ್ನ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಒಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ ‘ಡಿಯರ್ ಸತ್ಯ’ ನಿರ್ಮಾಣ ಮಾಡಿದ್ದೇವೆ. ಸಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಚಿತ್ರ ಬಿಡುಗಡೆಗೆ ನಿರ್ಧರಿಸಿದ್ದೇವೆ’ ಎಂದರು ನಿರ್ಮಾಪಕ ಗಣೇಶ್ ಪಾಪಣ್ಣ. ಕನ್ನಡ, ತಮಿಳು ಮಲಯಾಳಂ ಭಾಷೆಗಳಲ್ಲಿ ಡಿಯರ್ ಸತ್ಯ ಸಿನಿಮಾ ರಿಲೀಸ್ ಆಗಲಿದೆ.

‘ಜಿಗರ್ ಥಂಡ, ತ್ರಾಟಕ, ಆ ದೃಶ್ಯ ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದುಕೊಂಡೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯವೂ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಶಿವಗಣೇಶ್. ಚಿತ್ರದ ಸಾಹಸ ಸನ್ನಿವೇಶಗಳನ್ನು ಕುಂಗ್-ಫೂ ಚಂದ್ರು ಸಂಯೋಜಿಸಿದ್ದಾರೆ. 

SCROLL FOR NEXT