ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಂಭಾವನೆ ವಿಚಾರದಲ್ಲಿ ಜಗಳ, ವೈಮನಸ್ಸು ಏರ್ಪಟ್ಟ ಸಾಕಷ್ಟು ಉದಾಹರಣೆ ಇದೆ. ನಿರ್ಮಾಪಕರು ಸಂಭಾವನೆ ಕೊಟ್ಟಿಲ್ಲ ಎಂದು ದೂರುವ ಅನೇಕ ನಟ/ನಟಿಯರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪುನೀತ್ ಕುಟುಂಬದವರು ಮತ್ತೊಮ್ಮೆ ದೊಡ್ಡತನ ಮೆರೆದಿದ್ದಾರೆ.
ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಕೆಲವು ಚಿತ್ರಗಳು ಪೂರ್ಣಗೊಂಡಿವೆ. ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಈ ಪೈಕಿ ಕೆಲ ಸಿನಿಮಾಗಳಿಗೆ ಪುನೀತ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು. ಈ ಪೈಕಿ ಒಂದು ಸಿನಿಮಾದ ಅಡ್ವಾನ್ಸ್ ಅನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ಅವರು ಕನ್ನಡ ಸಿನಿಮಾ ನಿರ್ಮಾಪಕರು. ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ದೂರವಾಣಿ ಕರೆ ಮಾಡಿದವರು, ‘ಪುನೀತ್ ತಮ್ಮ ಡೈರಿಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಅಪ್ಪು ಕನಸು 'ಗಂಧದ ಗುಡಿ'ಗೆ ಮೆಚ್ಚುಗೆಯ ಮಹಾಪೂರ: ಅದ್ಭುತ ದೃಶ್ಯಕಾವ್ಯ ಎಂದ ಸಿಎಂ, ಸೆಲೆಬ್ರಿಟಿಗಳಿಂದ ಪ್ರಶಂಸೆ
ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.50 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ’ ಎಂದರು ಆ ಮಹಿಳೆ. ಹೀಗೆ ಹೇಳಿದ ಮಹಿಳೆ ಅಶ್ವಿನಿ ಪುನೀತ್ ರಾಜ್ಕುಮಾರ್. ಇದು ಪ್ರಾಮಾಣಿಕತೆ. ಕನ್ನಡದ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್ ಕುಟುಂಬ ಇರುವುದೇ ಹೀಗೆ’ ಎಂದು ಅವರು ಬರೆದುಕೊಂಡಿದ್ದಾರೆ.