ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಟ ಚಿರು ಸರ್ಜಾ ಅಗಲಿ ಒಂದು ವರ್ಷ: ಕುಟುಂಬಸ್ಥರಿಂದ ಸಮಾಧಿಗೆ ಪೂಜೆ 

Sumana Upadhyaya

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ(ಜೂನ್ 7)ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ದಿನ ಇದ್ದಕ್ಕಿದ್ದಂತೆ ಅವರು ಹೃದಯಾಘಾತದಿಂದ ನಿಧನರಾಗಿ ಅವರ ಕುಟುಂಬದವರನ್ನು, ಅಭಿಮಾನಿಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿದ್ದರು.

ಚಿರು ಸರ್ಜಾ ನಿಧನರಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರ ಪತ್ನಿ ನಟಿ ಮೇಘನಾ ಸರ್ಜಾ, ತಮ್ಮ ನಟ ಧ್ರುವ ಸರ್ಜಾ ಸೇರಿದಂತೆ ಹಲವರು ಭಾವುಕ ಪತ್ರ ಬರೆದು ಸ್ಮರಿಸಿಕೊಂಡಿದ್ದಾರೆ.

'ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ, ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದಿಗೂ ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ಕುಟುಂಬ..ಎಂದು ಇಡೀ ಕುಟುಂಬ ಭಾವುಕ ಪತ್ರವನ್ನು ಹಂಚಿಕೊಂಡಿದ್ದಾರೆ.

ಸಮಾಧಿಗೆ ಪೂಜೆ: ಇಂದು ಮೊದಲ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಸರ್ಜಾ ಮತ್ತು ಮೇಘನಾ ರಾಜ್ ಕುಟುಂಬಸ್ಥರು ಬೆಂಗಳೂರಿನ ಹೊರವಲಯ ಕನಕಪುರದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ ಗೆ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. 

SCROLL FOR NEXT