ಬೆಂಗಳೂರು: ಮಹಿಳಾ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೆಸರು ಕರ್ನಾಟಕದಲ್ಲಿ ಜನಪ್ರಿಯ. 2009ರ ಬ್ಯಾಚ್ ನ ಕರ್ನಾಟಕ ಕೆಡರ್ ನ ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಸಮರ್ಥ ಆಡಳಿತದಿಂದ ಮತ್ತು ಅಷ್ಟೇ ವಿವಾದಗಳಿಂದ ಹೆಸರಾಗಿದ್ದಾರೆ.
ಇತ್ತೀಚೆಗೆ ಮೈಸೂರು ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿರುವ ರೋಹಿಣಿ ಸಿಂಧೂರಿಯವರನ್ನು ಸರ್ಕಾರ ನಂತರ ಎದ್ದ ವಿವಾದಗಳಿಂದ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಿದೆ. ಇದೀಗ ಈ ಮಹಿಳಾ ಅಧಿಕಾರಿಯ ಜೀವನ ಚರಿತ್ರೆಯಾಧಾರಿತ ಚಿತ್ರ ಸಿದ್ದವಾಗುತ್ತಿದೆ ಎಂದು ತಿಳಿದುಬಂದಿದೆ.
ಮಂಡ್ಯ ಮೂಲದ ಹಿರಿಯ ಪತ್ರಕರ್ತ ಕೃಷ್ಣ ಸ್ವರ್ಣಸಂದ್ರ ಎಂಬುವವರು 'ಭಾರತ ಸಿಂಧೂರಿ' ಶೀರ್ಷಿಕೆಯಡಿ ಚಿತ್ರ ತಯಾರಿಸುತ್ತಿದ್ದು ಕಳೆದ ವರ್ಷ ಜೂನ್ ನಲ್ಲಿಯೇ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೋಹಿಣಿ ಸಿಂಧೂರಿ ಅವರ ಪಾತ್ರದಲ್ಲಿ ಕನ್ನಡ ಬಿಗ್ ಬಾಸ್ ನ ಸ್ಪರ್ಧಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ನಟಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.