ಸಿನಿಮಾ ಸುದ್ದಿ

ಸಂಚಾರಿ ವಿಜಯ್ ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ!

Sumana Upadhyaya

ಬೆಂಗಳೂರು: ಬೈಕ್ ಅಪಘಾತದಲ್ಲಿ ಮೆದುಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದೆ.

ಯಾವುದೇ ರೀತಿಯಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ವೈದ್ಯರು ಇಂದು ಅವರ ದೇಹದ ಸ್ಥಿತಿ ಬಗ್ಗೆ ಅವರ ಕುಟುಂಬಸ್ಥರಿಗೆ ವಿವರಿಸಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ನಂತರ ಅವರ ಸೋದರ ಸಿದ್ದೇಶ್ ಕುಮಾರ್ ಭಾವಪೂರ್ಣಕವಾಗಿ ಮಾತನಾಡಿದ್ದಾರೆ. 

 'ಮೆದುಳು ನಿಷ್ಕ್ರಿಯ ಆಗಿರುವುದರಿಂದ ಬದುಕುವ ಸಾಧ್ಯತೆ ಕಮ್ಮಿ ಇದೆ ಎಂದು ವೈದ್ಯರು ಹೇಳಿದ್ದಾರೆ. ನನಗೆ ತುಂಬ ಕಷ್ಟವಾಗುತ್ತಿದೆ. ಅವರಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳೆಲ್ಲ ಬಂದಿದ್ದವು. ಅದನ್ನೆಲ್ಲ ಬದಿಗಿಟ್ಟಿರೂ, ಅವರೊಬ್ಬ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿ. ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಕೋವಿಡ್ ಸಮಯದಲ್ಲಿ, ನೆರೆ ಹಾವಳಿ ಸಂದರ್ಭದಲ್ಲಿ ಜನರ ಸೇವೆಗೆ ಸದಾ ಮುಂದಿರುತ್ತಿದ್ದರು. ಸಮಾಜಕ್ಕೋಸ್ಕರ ಕೆಲಸ ಮಾಡುವುದರಲ್ಲಿ ವಿಜಯ್ ಯಾವಾಗಲೂ ಮುಂದೆ ಇರುತ್ತಿದ್ದರು. ಕುಟುಂಬದವರು ಚರ್ಚೆ ಮಾಡಿ, ವಿಜಯ್ ಅಂಗಾಂಗಳನ್ನು ದಾನ ಮಾಡಲು ನಿರ್ಧಾರ ಮಾಡಿದ್ದೇವೆ' ಎಂದು ಹೇಳಿದ್ದಾರೆ.

'ಅಂಗಾಂಗ ದಾನ ಮಾಡುವುದರಿಂದ ವಿಜಯ್ ಆತ್ಮಕ್ಕೆ ಶಾಂತಿ ಸಿಗತ್ತೆ. ನಾವು ಈಗಲೇ ಆ ಮಾತು ಹೇಳಬಾರದು. ವೈದ್ಯರ ಪ್ರಕಾರ ನಾರ್ಮಲ್ ಡೆತ್ ಆದರೆ ಅದನ್ನು ಮಾಡೋಕೂ ಆಗಲ್ಲ.. ನಮ್ಮ ಸಹೋದರನಿಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ, ಸರ್ಕಾರದ ಪ್ರತಿನಿಧಿಗಳಿಗೂ ಧನ್ಯವಾದಗಳು. ನಮ್ಮದು ಬ್ಯಾಡ್ ಟೈಮ್‌.. ನನ್ನ ಪಾಲಿಗೆ ವಿಜಯ್‌ ಲೆಜೆಂಡ್.. ಅವನು ಇಲ್ಲದೇ ಇರೋದನ್ನು ನಂಬೋಕೆ ಆಗ್ತಾ ಇಲ್ಲ..' ಎಂದು ಸಿದ್ದೇಶ್‌ ಹೇಳಿದ್ದಾರೆ.

SCROLL FOR NEXT