ತಮ್ಮ ಮುಂದಿನ ಸಿನಿಮಾವನ್ನು ಬಿಗ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿದೆ ಎಂದು ಈ ಮೊದಲು ನಿಖಿಲ್ ಕುಮಾರಸ್ವಾಮಿ ಹೇಳಿದ್ದರು. ಜಾಗ್ವಾರ್ ನಾಯಕನ ಮುಂದಿನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದನ್ನು ದೃಢಪಡಿಸಿದೆ.
ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಖತ್ ಮತ್ತು ಬೈ ಟು ಲವ್ ಸಿನಿಮಾ ತಯಾರಾಗಿದ್ದು ರಿಲೀಸ್ ಆಗಬೇಕಾಗಿದೆ. ನಿಖಿಲ್ ಕುಮಾರಸ್ವಾಮಿ ಸಿನಿಮಾವನ್ನು ಚೊಚ್ಚಲ ನಿರ್ದೇಶಕ ಮಂಜು ಅಥರ್ವ ನಿರ್ದೇಶಿಸುತ್ತಿದ್ದಾರೆ, ಮಂಜು ಅಥರ್ವ ಹಲವು ದೊಡ್ಡ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.
ಮಂಜು ಮಾಂಡವ್ಯ, ನರ್ತನ್, ಹಾಗೂ ಜೋಗಿ ಪ್ರೇಮ್ ಅವರ ಪ್ರೇ ಪೂಜ್ಯಂ ಮತ್ತು ತಮಿಳು ನಿರ್ದೇಶಕ ಕಾತಿರ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಇದೇ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ, ನಿರ್ದೇಶನದ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಕೂಡ ಬರೆದಿದ್ದಾರೆ. ನಿಖಿಲ್ ಮತ್ತು ಕೆವಿಎನ್ ಪ್ರೊಡಕ್ಷನ್ ಜೊತೆ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ, ಸಿನಿಮಾ ತಂಡ ಉತ್ತಮ ತಂತ್ರಜ್ಞರನ್ನು ಹೊಂದಿದೆ ಎಂದು ಮಂಜು ತಿಳಿಸಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.
ಚೊಚ್ಚಲ ನಿರ್ದೇಶಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಜೊತೆಗೆ ಸಾಕಷ್ಟು ಜವಾಬ್ದಾರಿಯಿದೆ ಎಂದು ಮಂಜು ಹೇಳಿದ್ದಾರೆ. ಸಿನಿಮಾ ಸದ್ಯಕ್ಕೆ ಕನ್ನಡದಲ್ಲಿ ತಯಾರಾಗಲಿದ್ದು, ಬೇರೆ ಭಾಷೆಯ ಬಗ್ಗೆ ನಿರ್ದೇಶಕರು ಚಿಂತಿಸಲಿದ್ದಾರೆ ಎಂದು ಮಂಜು ತಿಳಿಸಿದ್ದಾರೆ. ಶೂಟಿಂಗ್ ಇನ್ನೂ ಆರಂಭಿಕ ಹಂತದಲ್ಲಿದ್ದು ಆಗಸ್ಟ್ ನಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದ್ದಾರೆ.