ಸಿನಿಮಾ ಸುದ್ದಿ

'ತಮ್ಮ ಹೋದ ನೋವು ಸದಾ ಕಾಡುತ್ತಿರುತ್ತದೆ, ತಾಳಿಕೊಂಡು ಮುಂದೆ ಹೋಗಬೇಕಷ್ಟೆ, ಅಪ್ಪು ಮಕ್ಕಳು ಧೈರ್ಯ ತೆಗೆದುಕೊಂಡಿದ್ದಾರೆ': ಶಿವರಾಜ್ ಕುಮಾರ್

Sumana Upadhyaya

ಬೆಂಗಳೂರು: ಕರುನಾಡಿನ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneet Rajkumar) ನಿಧನರಾಗಿ ಇಂದು ನವೆಂಬರ್ 16ಕ್ಕೆ 19 ದಿನಗಳಾಗುತ್ತಿದೆ. ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್ ನಮನ'ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ಕಾರ್ಯಕ್ರಮಕ್ಕೆ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಸ್ಯಾಂಡಲ್ ವುಡ್ ಕಲಾವಿದರು, ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು, ಡಾ ರಾಜ್ ಕುಮಾರ್ ಕುಟುಂಬ ಸದಸ್ಯರು ಭಾಗವಹಿಸುತ್ತಿದ್ದಾರೆ.

ಅಭಿಮಾನಿಗಳು ಬೇಸರಗೊಳ್ಳಬೇಡಿ: ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಾ ಶಿವರಾಜ್ ಕುಮಾರ್, ಅಭಿಮಾನಿಗಳಿಂದ ನಾವು ಕಲಾವಿದರು ಅಸ್ತಿತ್ವದಲ್ಲಿರುವುದರಿಂದ ಪುನೀತ್ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ತಪ್ಪೇನಿಲ್ಲ, ಸದ್ಯದಲ್ಲಿಯೇ ಸಾರ್ವಜನಿಕರಿಗೂ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದು ಸಾರಾ ಗೋವಿಂದ್ ಹೇಳಿದ್ದಾರೆ. ಅದು ನೆರವೇರಬಹುದು ಎಂದರು.

ಇನ್ನು ತಮ್ಮ ಆರೋಗ್ಯದ ಬಗ್ಗೆ ಹಬ್ಬಿರುವ ವದಂತಿ, ಅಭಿಮಾನಿಗಳು ಆತಂಕಗೊಂಡಿರುವ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಕೆಲ ದಿನಗಳಿಂದ ಬೆನ್ನು ನೋವು ಮತ್ತು ಸ್ನಾಯು ಸೆಳೆತ ಕಂಡುಬಂತು. ಅದು ಬಿಟ್ಟರೆ ಚೆನ್ನಾಗಿ ಆರೋಗ್ಯವಾಗಿದ್ದೇನೆ, ತಮ್ಮ ಹೋದ ನೋವು ಇದೆ, ಇನ್ನು ಮುಂದೆ ಕೂಡ ಇರುತ್ತದೆ, ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ. ತಾಳಿಕೊಂಡು ಮುಂದೆ ಹೋಗಬೇಕಷ್ಟೆ ಎಂದರು.

ಜೀವನ ಮುಂದುವರಿಸಿಕೊಂಡು ಹೋಗಬೇಕು, ದೇವರು ನಮಗೆ ಶಕ್ತಿ ನೀಡಬೇಕು, ಅಭಿಮಾನಿಗಳು ಶಕ್ತಿ ತುಂಬುತ್ತಿದ್ದಾರೆ. ಪ್ರೀತಿ ತೋರಿಸುತ್ತಿದ್ದಾರೆ. ಜೀವನ ಮುಂದುವರಿಸಿಕೊಂಡು ಹೋಗಬೇಕು ಎಂದರು.

ಅಪ್ಪು ಮಕ್ಕಳು ಧೈರ್ಯವಾಗಿದ್ದಾರೆ: ಇನ್ನು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಕೂಡ ಮಾತನಾಡಿರುವ ಶಿವರಾಜ್ ಕುಮಾರ್, ಅಪ್ಪು ಮಕ್ಕಳು ಧೈರ್ಯ ತೆಗೆದುಕೊಂಡಿದ್ದಾರೆ. ಅಪ್ಪು ಮಕ್ಕಳನ್ನು ಚೆನ್ನಾಗಿ ಧೈರ್ಯವಾಗಿ ಬೆಳೆಸಿದ್ದಾನೆ. ಎಷ್ಟಾದರೂ ತಂದೆ ಕಳೆದುಕೊಂಡ ಭಾವ ಆ ಮಕ್ಕಳಲ್ಲಿ ಇದ್ದೇ ಇರುತ್ತದೆ. ಯಾರು ಎಷ್ಟೇ ಪ್ರೀತಿ ತೋರಿಸಿದರೂ ತಂದೆಯ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ, ದೇವರು ನಮ್ಮ ಕುಟುಂಬಕ್ಕೆ ತಾಳಿಕೊಂಡು ಹೋಗುವ ಶಕ್ತಿ ನೀಡಲಿ ಎಂದು ಕೇಳಿಕೊಂಡರು. 

SCROLL FOR NEXT