ಸಿನಿಮಾ ಸುದ್ದಿ

ಪಿ.ಟಿ ಟೀಚರ್ ಶರಣ್ 'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿ ತತ್ವ ಸಾರಲಿರುವ ಸುರೇಶ್ ಹೆಬ್ಳೀಕರ್ 

Harshavardhan M

ಬೆಂಗಳೂರು: ಹೊಸ ಕನ್ನಡ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಶರಣ್ ನಾಯಕರಾಗಿ ನಟಿಸುತ್ತಿರುವ 'ಗುರು ಶಿಷ್ಯರು' ಸಿನಿಮಾದಲ್ಲಿ ನಟ ಸುರೇಶ್ ಹೆಬ್ಳೀಕರ್ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. 

ಈ ನೂತನ ಫೋಟೋದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿವಾದಿಯೆಂದು ತೋರುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಿದೆ. ಸುರೇಶ್ ಅವರು ಗ್ರಾಮದ ಮುಖಂಡನಾಗಿದ್ದು, ಶಾಲೆಯೊಂದನ್ನು ನಡೆಸುತ್ತಿರುತ್ತಾರೆ. ಸಿನಿಮಾದಲ್ಲಿ ಅವರು ಮಹಾತ್ಮಾ ಗಾಂಧಿ ಅನುಯಾಯಿ.

ಸುರೇಶ್ ಹೆಬ್ಳೀಕರ್ ಅವರು ಮುಖ್ಯವಾಹಿನಿ ಸಿನಿಮಗಳಲ್ಲಿ ನಟಿಸದೇ ಹಲವು ಸಮಯವೇ ಕಳೆದಿದೆ. ಹೊಸ ಕಮರ್ಷಿಯಲ್ ಸಿನಿಮಾಗಳ ಬಗೆಗೆ ಅವರಿಗಿರುವ ಆತಂಕವೇ ಅದಕ್ಕೆ ಕಾರಣ ಎಂದು ತರುಣ್ ಸುಧೀರ್ ಅಭಿಪ್ರಾಯಪಟ್ಟಿದ್ದಾರೆ.

ಗುರುಶಿಷ್ಯರು ಸಿನಿಮಾಗಾಗಿ ಅವರನ್ನು ಸಂಪರ್ಕಿಸಿದಾಗ ಸಿನಿಮಾ ಕಥೆ ಕೇಳಿ ಗಾಂಧಿವಾದಿ ಪಾತ್ರದಲ್ಲಿ ನಟಿಸುವುದರಿಂದ ಚಿತ್ರದ ಕಥೆಗೆ ಹೊಸ ಆಯಾಮ ದೊರೆಯುತ್ತದೆ ಎನ್ನುವುದು ಅವರಿಗೆ ಮನದಟ್ಟಾದ ನಂತರವೇ  ಸುರೇಶ್ ಹೆಬ್ಳೀಕರ್ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಎಂದು ಸಿನಿಮಾದ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ಹೇಳಿದ್ದಾರೆ.

ಗುರುಶಿಷ್ಯರು ಸಿನಿಮಾಗೆ ಶರಣ್ ಅವರ ಪ್ರೊಡಕ್ಷನ್ ಹೌಸ್ ಲಡ್ಡು ಸಿನಿಮಾಸ್ ಮತ್ತು ತರುಣ್ ಸುಧೀರ್ ಅವರ ಕ್ರಿಯೇಟಿವ್ಜ್ ಸಂಸ್ಥೆಗಳಿಂದ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಪಿ.ಟಿ ಟೀಚರ್ ಪಾತ್ರದಲ್ಲಿ ಶರಣ್ ಕಾಣಿಸಿಕೊಂಡರೆ, ನಾಯಕಿ ನಿಶ್ವಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಡೇಶ ಕೆ. ಕಂಪಿ ಅವರು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಆರೂರು ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

SCROLL FOR NEXT