ಸಿನಿಮಾ ಸುದ್ದಿ

ನೆಚ್ಚಿನ ನಟ 'ಅಪ್ಪು'ಗೆ ಭಾವಪೂರ್ಣ ವಿದಾಯ: ನಾಲ್ವರು ಅಭಿಮಾನಿಗಳ ಸಾವು

Sumana Upadhyaya

ಬೆಂಗಳೂರು: ಕುಟುಂಬದಲ್ಲಿ ಯಾರಾದರೊಬ್ಬರು ತೀರಿಕೊಂಡಾಗ ಆ ಸಮಯದಲ್ಲಿ ಮನೆಯಲ್ಲಿ ಇತರ ಸದಸ್ಯರು ಅಡುಗೆ ಮಾಡಿ ಊಟ ಮಾಡುವುದಿಲ್ಲ ಎಂದು ಸ್ಯಾಂಡಲ್ ವುಡ್ ನ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಲಕ್ಷ್ಮಮ್ಮ ಹೇಳುತ್ತಾರೆ. 

ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನಕ್ಕೆ ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ತಮ್ಮ ಮನೆಯ ಹುಡುಗ, ಮನೆ ಸದಸ್ಯ ತೀರಿಕೊಂಡಾಗ ಎಷ್ಟು ದುಃಖಪಡುತ್ತೇವೆಯೋ ಅಷ್ಟು ದುಃಖದಲ್ಲಿ ಅವರ ಬಂಧುಗಳು, ಹಲವು ಅಭಿಮಾನಿಗಳಿದ್ದಾರೆ. ಅನೇಕರ ಮನೆಯಲ್ಲಿ ಕಳೆದೆರಡು ದಿನಗಳಿಂದ ಒಲೆ ಉರಿದಿಲ್ಲ, ಸರಿಯಾಗಿ ಊಟ-ತಿಂಡಿ ಮಾಡಿ ತಿನ್ನುತ್ತಿಲ್ಲ. 

ಬೆಂಗಳೂರಿನ ಹಲವು ಸಮುದಾಯಗಳಲ್ಲಿ ಸಮುದಾಯಗಳಲ್ಲಿ ಅಡುಗೆ ಮಾಡಿ ಆಯಾ ಪ್ರದೇಶಗಳಲ್ಲಿ ಹಂಚಲಾಗುತ್ತಿದೆ. ಮೊನ್ನೆ ಶುಕ್ರವಾರ ಪುನೀತ್ ಅವರು ನಿಧನ ಹೊಂದಿದ ಬಳಿಕ ವಾರಾಂತ್ಯವಾದರೂ ಬೆಂಗಳೂರಿನಲ್ಲಿ ಬಹುತೇಕ ಕಡೆ ಸಂಚಾರ ದಟ್ಟಣೆಯಿಲ್ಲ, ಕಂಠೀರವ ಸ್ಟೇಡಿಯಂ ಹೋಗುವ ರಸ್ತೆ ಮಾತ್ರ ಗಿಜಿಗಿಡುತ್ತಿತ್ತು.

ನಮ್ಮ ಪ್ರೀತಿಯ ಅಪ್ಪು ನಿಧನಕ್ಕೆ ಪ್ರೀತಿ-ಗೌರವ ತೋರಿಸುವ ಸಲುವಾಗಿ ಕಳೆದೆರಡು ದಿನಗಳಿಂದ ನಾವು ಅಡುಗೆಯನ್ನೇ ಮಾಡಿಲ್ಲ. ನಾನು ಸೋದರನನ್ನು ಕಳೆದುಕೊಂಡಿದ್ದೇನೆ ಎನ್ನುತ್ತಾರೆ ಲಕ್ಷ್ಮಮ್ಮ.

ನಾಲ್ವರು ಅಭಿಮಾನಿಗಳ ಸಾವು: ಪುನೀತ್ ನಿಧನದಿಂದ ಆಘಾತರಾಗಿ ರಾಜ್ಯಾದ್ಯಂತ ಅವರ ನಾಲ್ಕು ಮಂದಿ ಅಭಿಮಾನಿಗಳು ಮೃತಪಟ್ಟಿದ್ದಾರೆ. ಈಗ ಕಂಠೀರವ ಸ್ಟುಡಿಯೊದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅವರ ಅಂತ್ಯಕ್ರಿಯೆ ನೆರವೇರುತ್ತಿದೆ. ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅವರ ಮೃತದೇಹದ ಸಮಾಧಿ ಮಾಡಲಾಗುತ್ತದೆ. ಇಲ್ಲಿಗೆ ಕುಟುಂಬಸ್ಥರಿಗೆ ಮತ್ತು ಗಣ್ಯರಿಗೆ ಮಾತ್ರ ಪ್ರವೇಶವಿದೆ. 

ನಿನ್ನೆ ರಾತ್ರಿಯವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಮಂದಿ ಪುನೀತ್ ಮೃತದೇಹದ ಅಂತಿಮ ದರ್ಶನ ಮಾಡಿದ್ದಾರೆ. ಸಾವಿರಾರು ಮಂದಿ ಅಪ್ಪು ಅಪ್ಪು ಎಂದು ಕೂಗುತ್ತಿದ್ದರು, ಹೆಸರನ್ನು ಭಜನೆ ಮಾಡುತ್ತಿದ್ದರು. ತಮ್ಮ ನೆಚ್ಚಿನ ನಟನಿಗೆ ಅಂತಿಮ ವಿದಾಯ ಹೇಳುತ್ತಿದ್ದರು. ವಿಠಲ್ ಮಲ್ಯ ರಸ್ತೆ ತೀವ್ರ ದಟ್ಟಣೆಯಾಗಿತ್ತು.

SCROLL FOR NEXT