ಸಿನಿಮಾ ಸುದ್ದಿ

ತಮಿಳು ಚಿತ್ರರಂಗ ಪಾದಾರ್ಪಣೆಗೆ ಭರತ್ ಬೋಪಣ್ಣ ಸಜ್ಜು

Manjula VN

ಗಿರಿಜಾ ಕಲ್ಯಾಣ, ರಾಧಾ ಕಲ್ಯಾಣ, ಮತ್ತು ಬ್ರಹ್ಮಗಂಟು ನಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದು, ಡೆಮೊ ಪೀಸ್ ಮೂಲಕ ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಟ್ಟಿದ್ದ ನಟ ಭರತ್ ಬೋಪಣ್ಣ ಅವರು ಇದೀಗ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ಸಿದ್ಧಗೊಂಡಿರುವ ಪ್ಯಾನ್ ಇಂಡಿಯಾ 'ವಿಜಯಾನಂದ' ಚಿತ್ರದಲ್ಲಿ ಭರತ್ ಬೋಪಣ್ಣ ಅವರು ನಟಿಸಿದ್ದು, ಇದೀಗ ತಲೈವಿ ನಿರ್ದೇಶಕ ವಿಜಯ್ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಅಚ್ಚಂ ಎಂಬತ್ತು ಇಲ್ಲಯೇ ಎಂಬ ಚಿತ್ರದಲ್ಲಿ ಭರತ್ ಬೋಪಣ್ಣ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅರುಣ್ ವಿಜಯ್, ನಿಮಿಷಾ ಸಜಯನ್, ಮತ್ತು ಆಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಈಗಾಗಲೇ ಚಿತ್ರವೊಂದಕ್ಕೆ ಲಂಡನ್ ನಲ್ಲಿ ಚಿತ್ರೀಕರಣ ಮುಗಿಸಿ, ನಗರಕ್ಕೆ ವಾಪಸ್ಸಾಗಿದ್ದು, ಈ ನಡುವಲ್ಲೇ ತಮಿಳಿನಲ್ಲಿ ದೊಡ್ಡ ಬ್ರೇಕ್ ಸಿಕ್ಕಿರುವುದಕ್ಕೆ ಭರತ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದೊಂದು ಔಟ್ ಅಂಡ್ ಔಟ್ ಆಕ್ಷನ್ ಚಿತ್ರವಾಗಿದೆ. ನಾನು ಈ ಹಿಂದೆ ನಿರ್ದೇಶಕ ವಿಜಯ್ ಅವರ ಚಿತ್ರವೊಂದಕ್ಕೆ ಆಡಿಷನ್ ಪಾಲ್ಗೊಂಡಿದ್ದೆ, ಆದರೆ ದುರದೃಷ್ಟವಶಾತ್, ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. 3 ವರ್ಷಗಳ ನಂತರ ನಿರ್ದೇಶಕರಿಂದ ಕರೆ ಬಂದಿತು, ಕರೆ ಮಾಡಿದ ಅವರು ನೆಗೆಟಿವ್ ಪಾತ್ರದಲ್ಲಿ ನಟಿಸಲು ಆಸಕ್ತಿ ಇದೆಯೇ ಎಂದು ಕೇಳಿದರು. ನನ್ನನ್ನು ನೆನೆಸಿಕೊಂಡು ಅವಕಾಶ ಕೊಡುತ್ತಿರುವುದೇ ನನಗೆ ಹೆಚ್ಚು ಸಂತೋಷ ತಂದಿತು. ಹೀಗಾಗಿ ಹೌದು ಎಂದು ಹೇಳಿದೆ.

ಆ್ಯಕ್ಷನ್ ಪಾತ್ರಗಳ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಚಿತ್ರದಲ್ಲಿ ಆ್ಯಂಗ್ರಿ ಎಂಗ್ ಮ್ಯಾನ್ ಪಾತ್ರ ನನ್ನದಾಗಿದೆ. ಈ ಚಿತ್ರ ನನ್ನ ಕನಸನ್ನು ನನಸು ಮಾಡುವ ವಿಶ್ವಾಸವಿದೆ ಎಂದಿದ್ದಾರೆ. ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯಲಿದ್ದು, ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭರತ್ ಭಾಗಿಯಾಗಲಿದ್ದಾರೆ.

SCROLL FOR NEXT