ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.
ಕೆಆರ್ಜಿ ಸ್ಟುಡಿಯೋಸ್ನೊಂದಿಗೆ ಸುದೀಪ್ ಕೈಜೋಡಿಸಲಿದ್ದಾರೆ ಎನ್ನುವ ಸುದ್ದಿ ಇದೀಗ ವ್ಯಾಪಕ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಮ್ಮ ಮೂಲದ ಪ್ರಕಾರ, ಸುದೀಪ್ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಮತ್ತು ಇತರ ವಿವರಗಳೊಂದಿಗೆ ಯೋಜನೆಯ ಅಧಿಕೃತ ಪ್ರಕಟಣೆ ಮಾಡಲಾಗುವುದು ಎನ್ನಲಾಗಿದೆ.
ವಿತರಣಾ ಕಂಪನಿಯಾಗಿ ಪ್ರಾರಂಭವಾದ ಕೆಆರ್ಜಿ ಸ್ಟುಡಿಯೋಸ್, (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಮುಂದಾಳತ್ವ) 'ರತ್ನನ್ ಪ್ರಪಂಚ' ಚಿತ್ರದೊಂದಿಗೆ ನಿರ್ಮಾಣದಲ್ಲಿ ತೊಡಗಿತು. ನಂತರ 'ಗುರುದೇವ್ ಹೊಯ್ಸಳ' ಚಿತ್ರವನ್ನು ನಿರ್ಮಿಸಿತು. ಇದೀಗ ಧನಂಜಯ್ ಮತ್ತು ರಮ್ಯಾ ನಟನೆಯ ಉತ್ತರಕಾಂಡ ಸಿನಿಮಾದ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸಂಸ್ಥೆ ನಿರ್ಮಿಸಿರುವ ಎಲ್ಲಾ ಸಿನಿಮಾಗಳಲ್ಲಿ ಧನಂಜಯ್ ನಾಯಕ ಎನ್ನುವುದು ವಿಶೇಷ.
ಇದೀಗ ಸಂಸ್ಥೆಯು ಕಿಚ್ಚ ಸುದೀಪ್ ಅವರೊಂದಿಗೆ ಇದೇ ಮೊದಲ ಬಾರಿಗೆ ಹೈ-ಬಜೆಟ್ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದೆ ಎನ್ನಲಾಗಿದೆ. ಚಿತ್ರದ ನಿರ್ಮಾಪಕ ಮತ್ತು ನಟ ಯಾರೆಂಬುದು ಖಚಿತವಾಗಿದ್ದರೂ, ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬುದರ ಕುರಿತು ಯಾವುದೇ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಈ ಚಿತ್ರಕ್ಕೆ ಸ್ಟಾರ್ ನಿರ್ದೇಶಕರೊಬ್ಬರನ್ನು ಆಯ್ಕೆ ಮಾಡಲಾಗಿದೆ ಎಂಬ ಸುಳಿವು ಸಿಕ್ಕಿದೆ.
ಈಮಧ್ಯೆ, ವಿಜಯ್ ಕಾರ್ತಿಕೇಯ ನಿರ್ದೇಶನದ ಸುದೀಪ್ ಅವರ ಮುಂಬರುವ ಚಿತ್ರ 'ಕೆ 46'ನ ಶೀರ್ಷಿಕೆಯೂ ಈ ವಿಶೇಷ ದಿನದಂದು ಅನಾವರಣಗೊಳ್ಳಲಿದೆ. ಹೆಸರಾಂತ ತಮಿಳು ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲ್ಮ್ಸ್ ಕೂಡ ಸುದೀಪ್ ಜೊತೆ ತಮ್ಮ ಮುಂದಿನ ಚಿತ್ರ ಘೋಷಣೆ ಮಾಡುವ ನಿರೀಕ್ಷೆಯಿದೆ. ಇವುಗಳ ಹೊರತಾಗಿ, ಸುದೀಪ್ ಅವರು ವಿಕ್ರಾಂತ್ ರೋಣ ನಿರ್ದೇಶಕ ಅನುಪ್ ಭಂಡಾರಿ ಅವರ ಮುಂದಿನ 'ಬಿಲ್ಲ ರಂಗ ಬಾಷಾ' ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.