ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ರುಧಿರಂ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ ಎಂಬುದು ಈಗಾಗಲೇ ತಿಳಿದ ವಿಚಾರ. ಈ ಚಿತ್ರವನ್ನು ಜಿಶೋ ಲೋನ್ ಆಂಟೋನಿ ನಿರ್ದೇಶಿಸುತ್ತಿದ್ದು, ʼರುಧಿರಂʼ ಚಿತ್ರದ ಮುಹೂರ್ತ ಮಂಗಳವಾರ ಅದ್ದೂರಿಯಾಗಿ ನೆರವೇರಿದ್ದು, ಚಿತ್ರೀಕರಣ ಪ್ರಾರಂಭಗೊಂಡಿದೆ.
ಜಿಶೋ ಲೋನ್ ಆಂಟೋನಿ ಅವರೇ ಕಥೆ ಬರೆದಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಡುತ್ತಿದ್ದಾರೆ. ಅಲ್ಲದೆ, ಚಿತ್ರಕಥೆಯನ್ನು ಕೂಡ ತಾವು ಮತ್ತು ಜೋಸೆಫ್ ಕಿರಣ್ ಜಾರ್ಜ್ ಬರೆದಿದ್ದಾರೆ.
ಮುಹೂರ್ತ ಸಮಾರಂಭದ ಫೊಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ನಟ ರಾಜ್ ಬಿ ಶೆಟ್ಟಿ, ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕ ಜಿಶೋ ಲೋನ್ ಆಂಟೊನಿ ಮತ್ತು ನಿರ್ಮಾಪಕ ವಿಎಸ್ ಲಲನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಪರ್ಣಾ ಬಾಲಮುರಳಿಯವರೊಂದಿಗೆ ತೆರೆ ಹಂಚಿಕೊಳ್ಳಲು ಕಾತುರನಾಗಿದ್ದೇನೆ ಎಂದಿದ್ದಾರೆ.
ಮಣಿಯರಾಯಿಲೆ ಅಶೋಕನ್ ಅವರ ಸಂಕಲನ, ಮಿಧುನ್ ಮುಕುಂದನ್ (ರೋರ್ಸ್ಚಾಚ್) ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರುಧಿರಂ ಅನ್ನು ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.