ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ಜಟಾಪಟಿ ಮುಂದುವರಿದಿದೆ. ಈ ಪ್ರಕರಣವನ್ನು ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳಲು ಸುದೀಪ್ ಮುಂದಾಗಿದ್ದಾರೆ. ಇದಕ್ಕೆ ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಕುಮಾರ್ ಅವರು ಇಂದು (ಜುಲೈ 19) ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ನಟ 'ಕಿಚ್ಚ' ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂ ಎನ್ ಕುಮಾರ್ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಅತ್ತ ಕುಮಾರ್ ವಿರುದ್ಧ ಸುದೀಪ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ನಟ ರವಿಚಂದ್ರನ್, 'ನನ್ನ ಮಗನ (ಸುದೀಪ್) ಮೇಲೆ ಆರೋಪ ಬಂದಿದೆ, ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಮೊದಲು ಎಲ್ಲರೂ ಕೂಲ್ ಆಗಬೇಕು' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆ ಆಗಸ್ಟ್ 17ಕ್ಕೆ: ಬಾಯಿಗೆ ಬಂದಂತೆ ಮಾತನಾಡಬಾರದು ಎಂದ ಕಿಚ್ಚ ಸುದೀಪ್
'ಪರಿಸ್ಥಿತಿ ಸರಿ ಇಲ್ಲದೇ ಇರುವಾಗ ಮನಸ್ಥಿತಿಯೂ ಸರಿ ಇರಲ್ಲ. ಅವೆರಡನ್ನೂ ಬ್ಯಾಲೆನ್ಸ್ ಮಾಡುವುದೇ ಜೀವನ. ಸದ್ಯ ಎಲ್ಲರೂ ತಣ್ಣಗಾಗಬೇಕು. ನಮಗೆ ಇದರ ಬಗ್ಗೆ ಪೂರ್ತಿ ಸ್ಟೋರಿ ಗೊತ್ತಿರುವುದಿಲ್ಲ. ಆದರೆ ಸುದೀಪ್ಗೆ ಬೇಸರವಾಗಿರುವುದು ನಿಜ. ಬರೀ ಇಬ್ಬರ ಮಾತುಗಳನ್ನು ಕೇಳಿಕೊಂಡು ಯಾವ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ನಮ್ಮವರೆ, ನಮ್ಮ ಮನೆಯವರೇ. ಈಗ ನಿರ್ಮಾಪಕರು ನನ್ನ ಬಳಿ ಬಂದಿದ್ದಾರೆ. ಮೊದಲು ಎಲ್ಲರೂ ಕೂಲ್ ಆಗಬೇಕು. ಆಮೇಲೆ ನಾನು ಯೋಚನೆ ಮಾಡಬಹುದು. ನಾನು ಮಾತುಗಳನ್ನು ನಂಬುವುದಿಲ್ಲ. ದಾಖಲೆಗಳು ಬೇಕು' ಎಂದು ರವಿಚಂದ್ರನ್ ಹೇಳಿದ್ದಾರೆ.
ನಾನು ದಾಖಲೆಗಳನ್ನು ನೋಡಿದ ಮೇಲೆ, ಅದರಲ್ಲಿ ಎಷ್ಟು ಸತ್ಯ ಇದೆ? ಏನೆಲ್ಲ ಮಾತುಕತೆ ಆಗಿದೆ ಎಂಬುದುನ್ನು ನಾನು ಪರಿಶೀಲಿಸಬೇಕು. ನಿರ್ಧಾರವನ್ನು ನನ್ನ ತಿಳುವಳಿಕೆಗೆ ಬಿಡಬೇಕು. ಇವರು ನನಗೆ ನಿಡುವ ದಾಖಲೆಗಳು ಮೇಲೆ ನಾನು ಸುದೀಪ್ ಬಳಿ ಮಾತನಾಡಬೇಕಾ? ಬೇಡ್ವಾ ಅಂತ ನಾನು ತೀರ್ಮಾನ ಮಾಡ್ತಿನಿ. ಮೊದಲು ನಾನು ಹೇಳುವುದೇನೆಂದರೆ, ಕುಮಾರ್ ಧರಣಿಯನ್ನು ನಿಲ್ಲಿಸಬೇಕು' ಎಂದು ಅವರು ಹೇಳಿದ್ದಾರೆ.
ನನಗಿಂತಲೂ ಮೊದಲು ಸುದೀಪ್ಗೆ ಹೆಚ್ಚು ಆಪ್ತರಾಗಿರುವುದು ಕುಮಾರ್. ಇಬ್ಬರು ಜೊತೆಗೆ ಸಿನಿಮಾಗಳನ್ನು ಮಾಡಿದ್ದಾರೆ. ಇದು ಗಂಡ-ಹೆಂಡತಿ ಜಗಳ ಇದ್ದಂಗೆ. ಇದರಲ್ಲಿ ಮೂರನೇಯವರು ಬಂದಾಗ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಬೀದಿಗೆ ಬಂದಿರುವುದರಿಂದ ಏನೂ ಮಾಡೋಕಾಗಲ್ಲ. ಈ ವಿಷಯದಲ್ಲಿ ಎಂಟ್ರಿಯಾಗೋದು ಬೇಡ ಎಂದು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಮೊದಲು ಕುಮಾರ್ ಪ್ರತಿಭಟನೆ ನಲ್ಲಿಸಲಿ ಎಂದಿದ್ದಾರೆ.
ಇದನ್ನೂ ಓದಿ: ಬಿಡಿಗಾಸಿಲ್ಲದೆಯೂ ಬಿಗ್ ಬಜೆಟ್ ಸಿನಿಮಾ ಮಾಡುವುದ್ಹೇಗೆ?; ಸುದೀಪ್ ಮೇಲಿನ ಆರೋಪಗಳ ಹಿಂದೆ ಸೂರಪ್ಪ ಬಾಬು ಕೈವಾಡ?
ಆದರೆ ಇವರೆಲ್ಲ (ನಿರ್ಮಾಪಕರು) ಬಂದಿದ್ದಾರೆ. ನನಗೆ ಇಂಡಸ್ಟ್ರೀ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇದನ್ನು ಸರಿ ಮಾಡಲು ಸಾಧ್ಯವಾದರೆ, ಅದಕ್ಕಿಂತ ಖುಷಿಯಾದ ವಿಚಾರ ಇನ್ನೊಂದಿಲ್ಲ. ರವಿಚಂದ್ರನ್ ಮನೆಗೆ ಸುದೀಪ್ ಕೂಡ ಬರ್ತಾರೆ, ಕುಮಾರ್ ಕೂಡ ಬರ್ತಾರೆ.. ಮೊದಲು ಎಲ್ಲರನ್ನೂ ಕೂಲ್ ಮಾಡೋಣ' ಎಂದು ರವಿಚಂದ್ರನ್ ಹೇಳಿದ್ದಾರೆ.