ಸಿನಿಮಾ ಸುದ್ದಿ

ಮತ್ತೆ ನಿರ್ದೇಶನದತ್ತ ಹರೀಶ್ ರಾಜ್: ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ 'ಪ್ರೇತ'!

Shilpa D

ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಉತ್ತಮ ಅಭಿನಯದ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಾ ಬಂದಿರುವ ನಟ ಹರೀಶ್ ರಾಜ್. ಸದ್ಯ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಹರೀಶ್ ರಾಜ್ ಸಿನಿ ಬದುಕಿಗೆ 25 ವರ್ಷ ತುಂಬಿದೆ. ಈ ಬೆಳ್ಳಿ ಸಂಭ್ರಮದ ಖುಷಿಯಲ್ಲಿರುವ ಹರೀಶ್​​ ರಾಜ್​​ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

ನಟನೆ ಜೊತೆಗೆ ನಿರ್ದೇಶನದಲ್ಲಿಯೂ ಹೆಸರು ಮಾಡಿರುವ ಹರೀಶ್ ರಾಜ್ ಅವರು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತಮ್ಮದೇ ಹರೀಶ್ ರಾಜ್ ಪ್ರೊಡಕ್ಷನ್ಸ್​ನಡಿ 'ಪ್ರೇತ' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸ್ವತಃ ಹರೀಶ್ ರಾಜ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಜೊತೆಗೆ ಬಣ್ಣ ಕೂಡ ಹಚ್ಚಿದ್ದಾರೆ.

ಶೀರ್ಷಿಕೆಯೇ ಹೇಳುವಂತೆ ಇದೊಂದು ಹಾರರ್ ಸಿನಿಮಾ. ಚಿತ್ರಕ್ಕೆ ಹರೀಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಬಿ.ಎಂ ವೆಂಕಟೇಶ್, ಅಮಿತ್ ತಾರಾ ಬಳಗದಲ್ಲಿದ್ದಾರೆ. ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಚಿತ್ರಕ್ಕಿದೆ. ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ  ಬರೆದಿದ್ದಾರೆ.

ಪ್ರೇತ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ನಿರ್ಮಾಣಗೊಂಡಿದೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಮೂಡಿಬರುತ್ತಿದೆ. ವಿರಾಜಪೇಟೆ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿ‌ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪ್ರೇತ ಸಿನಿಮಾವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್​​ ಹಾಕಿಕೊಂಡಿದೆ.

ಕಲಾಕಾರ್, ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಹರೀಶ್ ರಾಜ್ ಮೂರು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಸಹಜವಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಈ ಪ್ರೇತ ಸಿನಿಮಾ ಹರೀಶ್ ರಾಜ್ ಸಿನಿ ಕೆರಿಯರ್​ನಲ್ಲಿ ದೊಡ್ಡ ಮಟ್ಟದ ಬ್ರೇಕ್ ನೀಡಲಿದೆ ಎಂಬುದು ಚಿತ್ರತಂಡದವರ ವಿಶ್ವಾಸ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

SCROLL FOR NEXT