ಪಣಜಿ: ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಪ್ಯಾನ್-ಇಂಡಿಯಾ ಸಿನಿಮಾ 'ಕಾಂತಾರ'ದ ಬೃಹತ್ ಯಶಸ್ಸಿನ ನಂತರ ತಮ್ಮ ಜೀವನ ಹೇಗೆ ಬದಲಾಯಿತು ಎಂಬುದರ ಕುರಿತು ಮಂಗಳವಾರ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ಭಾರತದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, 'ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಇದನ್ನು ಜವಾಬ್ದಾರಿ ಎಂದು ಪರಿಗಣಿಸುತ್ತೇನೆ. ಕನ್ನಡ ಚಿತ್ರರಂಗದ ಹೊರಗಿನ ಪ್ರೇಕ್ಷಕರಿಗೆ ಇದು ನನ್ನ ಮೊದಲ ಚಿತ್ರ. ಆದರೆ, ಅದಕ್ಕೂ ಮೊದಲು ನಾನು ಹಲವು ವರ್ಷಗಳಿಂದ ಚಂದನವನದಲ್ಲಿ ಕೆಲಸ ಮಾಡುತ್ತಿದ್ದೆ. ಖಂಡಿತ ಇದೊಂದು ಫಿಲ್ಮ್ ವಂಡರ್' ಎಂದರು.
'ಕಾಂತಾರ ನನ್ನನ್ನು ಇಡೀ ದೇಶಕ್ಕೆ ಪರಿಚಯಿಸಿದೆ ಮತ್ತು ತುಂಬಾ ಪ್ರೀತಿ-ಗೌರವವನ್ನು ಕೊಟ್ಟಿದೆ. ಹಾಗಾಗಿ ಕಾಂತಾರ ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳು. ಈ ಯಶಸ್ಸಿನ ನಂತರ ಸ್ವಲ್ಪ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಅದನ್ನು ಹೊರತುಪಡಿಸಿ ಬೇರೇನೂ ಬದಲಾಗಿಲ್ಲ. ಇದೀಗ ನಾವು 'ಕಾಂತಾರ' ಚಾಪ್ಟರ್ 1ಗಾಗಿ ಸಂಪೂರ್ಣ ತಯಾರಿಯಲ್ಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ ರಿಷಬ್.
ಚಿತ್ರತಂಡ ಸೋಮವಾರ 'ಕಾಂತಾರ ಚಾಪ್ಟರ್ 1'ರ ಟೀಸರ್ ಅನ್ನು ಅನಾವರಣಗೊಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಟೀಸರ್ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಕ್ಲೂ ನೀಡಿದೆ.
'ಕಾಂತಾರ ಚಾಪ್ಟರ್ 1' ಬಿಡುಗಡೆಯಾಗುವ ಪ್ರತಿಯೊಂದು ಏಳು ಭಾಷೆಗಳನ್ನು ಪ್ರತಿನಿಧಿಸುವ ಸಂಗೀತದ ಏಳು ವಿಭಿನ್ನ ರಾಗಗಳೊಂದಿಗೆ ಕ್ಲಿಪ್ ಮುಕ್ತಾಯವಾಯಿತು.
ಇದನ್ನೂ ಓದಿ: Kantara A Legend Chapter-1: ಫಸ್ಟ್ ಲುಕ್, ಟೀಸರ್ ಬಿಡುಗಡೆ, ಕುತೂಹಲ ಸೃಷ್ಟಿಸಿದ ರಿಷಬ್ ಶೆಟ್ಟಿ ರೌದ್ರಾವತಾರ!
'ಕಾಂತಾರ ಚಾಪ್ಟರ್ 1'ರಿಂದ ಏನನ್ನು ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಿಷಬ್, 'ಕಾಂತಾರದಿಂದಲೂ ಜನರು ಏನನ್ನೂ ನಿರೀಕ್ಷಿಸಲಿಲ್ಲ. ಉತ್ಸಾಹ ಮತ್ತು ನಿರೀಕ್ಷೆಗಳನ್ನು ನಾನು ಬಯಸುವುದಿಲ್ಲ. ಇದೊಂದು ದೊಡ್ಡ ಜವಾಬ್ದಾರಿಯಾಗಿದೆ. ನಾವು ಪೋಸ್ಟರ್ ಮತ್ತು ಕಾಂತಾರ ಚಾಪ್ಟರ್ 1ರ ಲುಕ್ ಅನ್ನು ಬಿಡುಗಡೆ ಮಾಡಿದ್ದೇವೆ. ಈಗ ಅದು ಪ್ರೇಕ್ಷಕರಿಗೆ ಬಿಟ್ಟದ್ದು. ಜನರು ಚಿತ್ರದ ಬಗ್ಗೆ ಮಾತನಾಡಿದರೆ ಉತ್ತಮ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
'ಕಾಂತಾರ' ಕಳೆದ ವರ್ಷ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿತ್ತು. ಚಿತ್ರದ ಕಥಾಹಂದರ ಮತ್ತು ದೃಶ್ಯಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.