ಸಿನಿಮಾ ಸುದ್ದಿ

'ಗಂಟುಮೂಟೆ' ಖ್ಯಾತಿಯ ಡಿಒಪಿ ಸಹದೇವ್ ಕೆಲವಡಿ ಈಗ ನಿರ್ದೇಶಕ; 'ಕೆಂಡ' ಸಿನಿಮಾದ ಚಿತ್ರೀಕರಣ ಮುಕ್ತಾಯ

Ramyashree GN

ಗಂಟುಮೂಟೆ ಚಿತ್ರದ ಛಾಯಾಗ್ರಾಹಕ ಸಹದೇವ್ ಕೆಲವಡಿ ಅವರು 'ಕೆಂಡ' ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಕಥೆಯನ್ನು ತಾವೇ ಬರೆದಿದ್ದು, ರೂಪ ರಾವ್ (ಗಂಟುಮೂಟೆಯ ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿ) ಜೊತೆಗೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅಮೆಯುಕ್ತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆಂಡ ನಿರ್ಮಾಣವಾಗಿದೆ.

ಕೆಂಡ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಇತ್ತೀಚೆಗೆ ಚಿತ್ರದ ತಾರಾಗಣ ಮತ್ತು ಬಳಗದ ವಿವರಗಳೊಂದಿಗೆ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಗೀತರಚನೆಕಾರ ಜಯಂತ್ ಕಾಯ್ಕಿಣಿ ಅವರ ಮಗ ಋತ್ವಿಕ್ ಕಾಯ್ಕಿಣಿ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ಕಾಯ್ಕಿಣಿ ಅವರು ಒಂದೆರಡು ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಗೋಪಾಲ ಕೃಷ್ಣ ದೇಶಪಾಂಡೆ ಹೊರತುಪಡಿಸಿ ಕೆಂಡ ಸಿನಿಮಾದಲ್ಲಿ ಭರತ್ ಬಿವಿ, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್ ಸೇರಿದಂತೆ ಹಲವರು ಹೊಸಬರನ್ನು ಒಳಗೊಂಡಿದೆ.

ರೂಪಾ ರಾವ್ ಮತ್ತು ಸಹದೇವ್ ಕೆಲವಡಿ

ಬೆಂಗಳೂರಿನಂತಹ ನಗರದಲ್ಲಿ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರಾಗಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವ್ಯೂಹದೊಳಗೆ ಸಿಲುಕುತ್ತಾನೆ. ಆತನನ್ನು ಪಟ್ಟಭದ್ರ ಹಿತಾಸಕ್ತಿಗಳು ಹೇಗೆಲ್ಲಾ ಬಳಸಿಕೊಳ್ಳುತ್ತವೆ. ಆತನ ಬದುಕು ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುವುದನ್ನು ಚಿತ್ರ ವಿವರಿಸುತ್ತದೆ.

ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಮತ್ತು ಪೆಡ್ರೊಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ಶ್ರೇಯಾಂಕ್ ನಂಜಪ್ಪ ಅವರು ಕೆಂಡಕ್ಕೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ.

SCROLL FOR NEXT