ಸಿನಿಮಾ ಸುದ್ದಿ

ಇನ್ನೂ ಹೆಸರಿಡದ ಬ್ರಹ್ಮ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ ಪಾತ್ರ!

Ramyashree GN

'ಸಿದ್ಧಿ ಸೀರೆ' ಸಿನಿಮಾ ನಿರ್ದೇಶಿಸಿದ್ದ ಬ್ರಹ್ಮಾನಂದ ರೆಡ್ಡಿ (ಬ್ರಹ್ಮ) ಅವರು ಇದೀಗ ಹೊಸ ಚಿತ್ರದ ನಿರ್ದೇಶನಕ್ಕಿಳಿದಿದ್ದಾರೆ. ಅವರ ಸಿದ್ದಿ ಸೀರೆ ಸಿನಿಮಾ ನ್ಯೂಯಾರ್ಕ್ ಮತ್ತು ಟೋಕಿಯೊ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿತ್ತು. ರಾಗಿಣಿ ದ್ವಿವೇದಿ ಅಭಿನಯದ ಅವರ 'ಸಾರಿ ಕರ್ಮ ರಿಟರ್ನ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 

ಈ ಮಧ್ಯೆ, ಬ್ರಹ್ಮಾ ಅವರು ನಟ ವಸಿಷ್ಠ ಸಿಂಹ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.  ವಸಿಷ್ಠ ಸಿಂಹ ಅವರ ಜನ್ಮದಿನದಂದೇ ಸಿನಿಮಾದ ಘೋಷಣೆ ಮಾಡಲಾಗಿದೆ.

ನಿರ್ದೇಶಕ ಬ್ರಹ್ಮ ತಮ್ಮ ಮುಂಬರುವ ಯೋಜನೆ ಕುರಿತು ಕೆಲ ವಿವರಗಳನ್ನು ಹಂಚಿಕೊಂಡಿದ್ದು, ಇದು ಕ್ರೈಮ್ ಥ್ರಿಲ್ಲರ್ ಎಂದು ವಿವರಿಸುತ್ತಾರೆ. 'ಇನ್ನೂ ಹೆಸರಿಡದ ಈ ಚಿತ್ರವನ್ನು ಅನನ್ಯವಾಗಿಸುವುದು ಅದರ ಕಥೆ ಹೇಳುವ ವಿಭಿನ್ನ ಶೈಲಿ. ಈ ರೀತಿಯ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಕಡಿಮೆ ಬಂದಿವೆ' ಎಂದು ನಾಯಕನನ್ನು ಎರಡು ಶೇಡ್‌ಗಳಲ್ಲಿ ಚಿತ್ರಿಸಲು ಉದ್ದೇಶಿಸಿರುವ ಬ್ರಹ್ಮ ಹೇಳುತ್ತಾರೆ.

ಈ ಚಿತ್ರಕ್ಕೆ ಕಲಾಸೃಷ್ಟಿ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದ್ದು, ಬೆಂಗಳೂರು, ಕೊಡಗು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ಪಾತ್ರವೊಂದರಲ್ಲಿ ನಟಿಸುತ್ತಿರುವ ಅಫ್ಜಲ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿಯೂ ಬಡ್ತಿ ಪಡೆಯಲಿದ್ದಾರೆ. ಚಿತ್ರಕ್ಕೆ ರಾಜೀವ್ ಗಣೇಶನ್ ಅವರ ಛಾಯಾಗ್ರಹಣ ಮತ್ತು ರಾಘವನ್ ಕಾರ್ತಿಕ್ ಅವರ ಸಂಗೀತ ಸಂಯೋಜನೆ ಇರಲಿದೆ.

ನವೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ನಟ ವಸಿಷ್ಠ ಸಿಂಹ ಅವರು 'Love... ಲಿ' ಮತ್ತು ತೆಲುಗು ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡೂ ಸಿನಿಮಾಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.

SCROLL FOR NEXT