ಗುರುದತ್ತ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದೆ. ಇದು ನಟ ಪ್ರಜ್ವಲ್ ದೇವರಾಜ್ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದೆ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಹೊಸ ಲುಕ್ ಅನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ನಟ ಪ್ರಜ್ವಲ್, ಯಕ್ಷಗಾನ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಪ್ರಜ್ವಲ್ ಕರಾವಳಿ ಸಿನಿಮಾದಲ್ಲಿ ವಿವಿಧ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಯಕ್ಷಗಾನದ ಪಾತ್ರವು ಚಿತ್ರದ ಹೈಲೈಟ್ಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ.
ಯಕ್ಷಗಾನದ ವೇಷಭೂಷಣ ಮಾಡುವಲ್ಲಿ ಪರಿಣತರಾಗಿರುವ ಪಲ್ಲವ ಗಾಣಿಗ ಅವರು ಪ್ರಜ್ವಲ್ ಅವರಿಗೆ ವೇಷಭೂಷಣ ಮತ್ತು ಮೇಕ್ಅಪ್ ಮಾಡಲು ಅರ್ಧ ದಿನ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ನಿರ್ದೇಶನದ ಹೊರತಾಗಿ, ಗುರುದತ್ತ ಗಾಣಿಗ ಅವರು ವಿಕೆ ಫಿಲ್ಮ್ಸ್ ಜೊತೆಗೆ ಈ ಯೋಜನೆಯನ್ನು ಸಹ ನಿರ್ಮಾಣ ಮಾಡಲಿದ್ದಾರೆ. ಗ್ರಾಮೀಣ ಹಿನ್ನೆಲೆಯ ಈ ಚಿತ್ರವು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಕಥೆಯನ್ನು ಹೊಂದಿದೆ. ಸಂಪದಾ ನಾಯಕಿಯಾಗಿ ನಟಿಸಿದ್ದು, ಇನ್ನುಳಿದಂತೆ ಮಿತ್ರ, ಶ್ರೀಧರ್ ಮತ್ತು ನಿರಂಜನ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ನೀಡಲಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡಿದ್ದಾರೆ.
ಸುಮಾರು ಶೇ 40 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಯುಗಾದಿ ನಂತರ ಮಂಗಳೂರು ಮತ್ತು ಸುತ್ತಮುತ್ತಲಿನ ಕಡೆಗಳಲ್ಲಿ ಮುಂದಿನ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜಿಸುತ್ತಿದ್ದಾರೆ.