ಕೆಲವು ವರ್ಷಗಳ ಹಿಂದೆ 'ಗ್ಯಾಪಲ್ಲೊಂದು ಸಿನಿಮಾ' ಮತ್ತು 'ಓಮಿನಿ' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಹೆದ್ದೂರು ಮಂಜುನಾಥ್ ಶೆಟ್ಟಿ ಇದೀಗ 'ಪಾಠಶಾಲಾ' ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಸಮಾರಂಭದಲ್ಲಿ ಪಾಕಶಾಲೆ ಪ್ರವೀಣ ಸಿಹಿ ಕಹಿ ಚಂದ್ರು ಮತ್ತು ಅವರ ಪತ್ನಿ ಸಿಹಿಕಹಿ ಗೀತಾ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.
ಹೆದ್ದೂರು ಮಂಜುನಾಥ್ ಅವರ ವೃತ್ತಿಜೀವನವು ಸಿಹಿ ಕಹಿ ಚಂದ್ರು ಮತ್ತು ಗೀತಾ ಅವರ ಫೈನಲ್ ಕಟ್ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಪ್ರಾರಂಭವಾಯಿತು. ಅಲ್ಲಿ ಅವರು ಜನಪ್ರಿಯ ಧಾರಾವಾಹಿ ಪಾರ್ವತಿ ಪರಮೇಶ್ವರದಲ್ಲಿ ಕೆಲಸ ಮಾಡಿದರು. 1,000 ಸಂಚಿಕೆಗಳಿಗೆ ಕೊಡುಗೆ ನೀಡಿದರು. ನಂತರ ಅವರು ಮಂಜಿನ ಹನಿ ಚಿತ್ರದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರೊಂದಿಗೆ ಕೆಲಸ ಮಾಡಿದರು. ಅಶೋಕ್ ಕಶ್ಯಪ್ ಮತ್ತು ಆನಂದ್ ಪಿ ರಾಜು ಅವರಂತಹ ಇತರರೊಂದಿಗೆ ಕೆಲಸ ಮಾಡಿದರು ಮತ್ತು ಚಲನಚಿತ್ರ ನಿರ್ಮಾಣದ ವಿವಿಧ ಅಂಶಗಳನ್ನು ಕಲಿತರು.
ತಮ್ಮ ನಿರ್ದೇಶನದ ಮೂರನೇ ಸಿನಿಮಾ ಆಗಿರುವ ಪಾಠಶಾಲಾದಲ್ಲಿ ಮಂಜುನಾಥ್ ಅವರು, 80 ಮತ್ತು 90ರ ದಶಕದಲ್ಲಿನ ವಿದ್ಯಾರ್ಥಿಗಳ ಸಾರವನ್ನು ತೆರೆ ಮೇಲೆ ತರಲಿದ್ದಾರೆ. ಈ ಚಿತ್ರಕ್ಕಾಗಿ ತಾವೇ ಹಣ ಹೂಡಿದ್ದಾರೆ. ಚಿತ್ರತಂಡದ ಪ್ರಕಾರ, ಚಿತ್ರವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳ ಕುರಿತು ಹೇಳುತ್ತದೆ.
ಈ ಚಿತ್ರದ ಪಾತ್ರಗಳಿಗಾಗಿ ಮಕ್ಕಳನ್ನು ಸಿದ್ಧಪಡಿಸಲೆಂದು ಕಾರ್ಯಾಗಾರ ನಡೆಸಲಾಗಿತ್ತು. ಆಗ 450 ಮಕ್ಕಳು ಪಾಲ್ಗೊಂಡಿದ್ದರು. ಮಂಜುನಾಥ್ ಮಾತನಾಡಿ, 'ಈ ಭೂಮಿಯ ಮೇಲಿನ ನನ್ನ ಸಮಯ ಮುಗಿಯುವ ಮೊದಲು ಹೆಚ್ಚಿನ ಮಹತ್ವ ಹೊಂದಿರುವ ಸಿನಿಮಾವನ್ನು ಮಾಡಬೇಕು ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ನನ್ನ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ' ಎಂದು ಹಂಚಿಕೊಂಡರು.
'ಪಾರ್ವತಿ ಪರಮೇಶ್ವರ' ಧಾರಾವಾಹಿಯ 'ತುತ್ತೂರಿ' ಪಾತ್ರ ನನಗೆ ಹೆಸರು ತಂದುಕೊಟ್ಟಿತು. ಈಗ, ನಾನು ಮತ್ತು ನನ್ನ ಪತ್ನಿ ಪ್ರೀತಿ ನಮ್ಮ ಬ್ಯಾನರ್ನ 'ಎಂಎಸ್ ಸ್ಕ್ವೇರ್ ಮೂವೀಸ್'ನಡಿಯಲ್ಲಿ ಹತ್ತಕ್ಕೂ ಹೆಚ್ಚು ಸ್ನೇಹಿತರ ಬೆಂಬಲದೊಂದಿಗೆ ಈ ಚಿತ್ರವನ್ನು ನಿರ್ಮಿಸಿದ್ದೇವೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಬಹುತೇಕ ಚಿತ್ರೀಕರಣ ನಡೆದಿದ್ದು, ಚಿತ್ರೀಕರಣಕ್ಕೂ ಮುನ್ನ ತರಬೇತಿ ಪಡೆದ ನಲವತ್ತಕ್ಕೂ ಹೆಚ್ಚು ಮಕ್ಕಳು ಕಥೆಗೆ ಜೀವ ತುಂಬಿದ್ದಾರೆ ಎನ್ನುತ್ತಾರೆ ಮಂಜುನಾಥ್.
ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್ ಮತ್ತು ಪ್ರಶಾಂತ್ ಮುಂತಾದ ನಟರು ಚಿತ್ರದ ಭಾಗವಾಗಿದ್ದಾರೆ. ಕಥೆಯು 80 ಮತ್ತು 90 ರ ದಶಕಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳ ಸುತ್ತ ಕೇಂದ್ರೀಕೃತವಾಗಿದೆ. ಆಗಿನ ಮುಗ್ಧತೆ ಮತ್ತು ಹೋರಾಟಗಳನ್ನು ಸೆರೆಹಿಡಿಯುತ್ತದೆ. ಪಾಠಶಾಲಾ ಚಿತ್ರಕ್ಕೆ 'ಓದು ಅಥವಾ ಓಡೋಗು' ಎಂಬ ಅಡಿಬರಹವಿದೆ. ಈ ಯೋಜನೆಯ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಡಬ್ಬಿಂಗ್ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಬೇಸಿಗೆ ರಜೆಗೂ ಮುನ್ನವೇ ಪಾಠಶಾಲಾ ಚಿತ್ರ ತೆರೆಕಾಣಲಿದೆ ಎಂದು ನಿರ್ದೇಶಕ ಹೆದ್ದೂರು ಮಂಜುನಾಥ್ ಶೆಟ್ಟಿ ಹಂಚಿಕೊಂಡಿದ್ದಾರೆ.