ಸಿನಿಮಾ ಸುದ್ದಿ

'ಕ್ರೀಂ' ನೇರವಾಗಿ ಸಂದೇಶ ನೀಡುವುದಿಲ್ಲ, ಆದರೆ ಇದು ಜಾಗೃತಿ ಮೂಡಿಸುತ್ತದೆ: ಅಗ್ನಿ ಶ್ರೀಧರ್

Lingaraj Badiger

ಪತ್ರಕರ್ತ ಹಾಗೂ ಲೇಖಕ ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು, ಅಭಿನಯಿಸಿರುವ 'ಕ್ರೀಂ' ಚಿತ್ರ ಮಾರ್ಚ್ 1 ರಂದು ಬಿಡುಗಡೆಗೆ ಸಿದ್ಧವಾಗಿದೆ. ಅಭಿಷೇಕ್ ಬಸಂತ್ ನಿರ್ದೇಶನದ ಈ ಚಿತ್ರದಲ್ಲಿ'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತಾ ಹೆಗಡೆ ನಾಯಕಿಯಾಗಿ ನಟಿಸಿದ್ದಾರೆ. ಡಿ.ಕೆ.ದೇವೇಂದ್ರ ಅವರು ಕ್ರೀಮ್' ನಿರ್ಮಾಣ ಮಾಡಿದ್ದಾರೆ.

'ಕ್ರೀಂ' ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಗ್ನಿ ಶ್ರೀಧರ್ ಅವರು, ಈ ಕಾದಂಬರಿ ಬರೆಯುವ ಹಿಂದಿನ ಸ್ಫೂರ್ತಿಯ ಒಳನೋಟಗಳನ್ನು ತಿಳಿಸಿದ್ದಾರೆ ಮತ್ತು ಸಮಕಾಲೀನ ಸಮಾಜದಲ್ಲಿ ಅಂತಹ ವಿಷಯಗಳ ಪ್ರಸ್ತುತತೆಯ ಮೇಲೆ ಇದು ಬೆಳಕು ಚೆಲ್ಲುತ್ತದೆ ಎಂದಿದ್ದಾರೆ.

ಡಿ ಕೆ ದೇವೇಂದ್ರ ನಿರ್ಮಾಣದ ಈ ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ, ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಮತ್ತು ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ.

ಈ ಚಿತ್ರದಲ್ಲಿ ಅಗ್ನಿ ಶ್ರೀಧರ್ ಅವರು ಯಜಮಾನ್ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಸಂದರ್ಭದಲ್ಲಿ 2024 ರಲ್ಲೂ ಧಾರ್ಮಿಕ ಹತ್ಯೆಗಳ ನಿರಂತರತೆಯ ಕುರಿತು ಶ್ರೀಧರ್ ಕ್ರೀಂ (ಮಹಾಕಾಳಿಯನ್ನು ಉಲ್ಲೇಖಿಸುವ ಪವಿತ್ರ ಪದ) ಪ್ರಸ್ತುತತೆಯನ್ನು ವಿವರಿಸಿದ್ದಾರೆ. "ಇಂದಿಗೂ ಸಹ ಜನ ದೇವರಿಗೆ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದಾರೆ ಮತ್ತು ಅದು ದೇವರುಗಳನ್ನು ಸಮಾಧಾನಪಡಿಸುತ್ತದೆ ಎಂದು ನಂಬುತ್ತಾರೆ. ಇವುಗಳಲ್ಲಿ, ನರಬಲಿಯು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ ಅದು ಕಾನೂನುಬಾಹಿರವಾಗಿರುವುದರಿಂದ ವಿವೇಚನೆಯಿಂದ ಮಾಡಲಾಗುತ್ತದೆ ಎಂದಿದ್ದಾರೆ.

"ನನ್ನ ಬರವಣಿಗೆಯ ಮೂಲಕ, ನಮ್ಮ ಸಮಾಜದ ಕಠೋರ ಸತ್ಯಗಳನ್ನು ಹೈಲೈಟ್ ಮಾಡುವ ಗುರಿಯನ್ನು ನಾನು ಹೊಂದಿದ್ದೇನೆ. ಇದರಲ್ಲಿ ಈ ಹತ್ಯೆಗಳು ಸಾಮಾನ್ಯವಾಗಿ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸುತ್ತದೆ" ಎಂದು ಪ್ರತಿಪಾದಿಸಿದ ಶ್ರೀಧರ್, "ಕ್ರೀಂ ನೇರವಾಗಿ ಸಂದೇಶ ನೀಡುವ ಉದ್ದೇಶ ಹೊಂದಿಲ್ಲ. ಆದರೆ ಇದು ಜಾಗೃತಿ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಒಂದು ದೊಡ್ಡ ಬ್ರೇಕ್ ನಂತರ ಮತ್ತೆ ನಟನೆಗೆ ಮರಳಿದ ಬಗ್ಗೆ ಶ್ರೀಧರ್, “ನಿರ್ಮಾಪಕರ ಸಹವರ್ತಿ ಪ್ರಜ್ವಲ್ ಅವರು ಪ್ರಮುಖ ಪಾತ್ರವನ್ನು ಮಾಡುವಂತೆ ನನಗೆ ಮನವೊಲಿಸಿದರು. ಹಲವಾರು ಜವಾಬ್ದಾರಿಗಳನ್ನು ಹೊತ್ತಿದ್ದರೂ, ಪ್ರಜ್ವಲ್ ಅವರ ಒತ್ತಾಯವನ್ನು ನಿರಾಕರಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

SCROLL FOR NEXT