ಸಿನಿಮಾ ಸುದ್ದಿ

ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ಬಿರುಕು: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪತ್ನಿ ಅಖಿಲಾ

Manjula VN

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ, ಕನ್ನಡ ಸಿನಿಮಾ ನಿರ್ದೇಶಕ ಮಂಸೋರೆ ಅವರ ವಿರುದ್ಧ ಪತ್ನಿ ಅಖಿಲಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪತಿ ಮಂಸೋರೆ ವಿರುದ್ಧ ಅಖಿಲಾ ಅವರು ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದಾರೆ.

ಮಂಸೋರೆ, ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಸಹೋದರಿ ಹೇಮಲತಾ ವಿರುದ್ಧ ಅಖಿಲಾ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ದೂರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಪತ್ರ ಬರೆದಿರುವ ಮಂಸೋರೆ, "ನನ್ನ ಪತ್ನಿ ಅಖಿಲಾ ಮಾನಸಿಕ ಅಸ್ವಸ್ಥರು. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ಈ ದೂರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯತೆಯನ್ನು ಮನಗಾಣಬೇಕಿದೆ. ಬಳಿಕ ನಾವು ಒಟ್ಟಿಗಿರಬೇಕೆ ಅಥವಾ ಬೇಡವೇ ಎಂಬುದನ್ನು ನಿಶ್ಚಯಿಸುತ್ತೇವೆ" ಎಂದು ತಿಳಿಸಿದ್ದಾರೆ.

ಪತ್ನಿ ಅಖಿಲಾ ತಮ್ಮ ದೂರಿನಲ್ಲಿ, ಪತಿ ಮಂಸೋರೆ (ಮಂಜುನಾಥ) ವೈವಾಹಿಕ ಜೀವನದ ಆರಂಭದಿಂದಲೂ ಕಿರುಕುಳ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ನಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ" ಎಂದು ಆರೋಪಿಸಿದ್ದಾರೆ.

"ಅಲ್ಲದೇ ಮಂಸೋರೆ, ಅವರ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಸಹೋದರಿ ಹೇಮಲತಾ ತಮಗೆ 30 ಲಕ್ಷ ರೂ. ಮೌಲ್ಯದ ಎಸ್.ಯು.ವಿ ಕಾರು ಕೊಡಿಸುವಂತೆ ಪೀಡಿಸಿದ್ದಾರೆ. ಈ ವಿಷಯವನ್ನು ಎಲ್ಲಾದರೂ ಹೇಳಿದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

SCROLL FOR NEXT