ಬೆಂಗಳೂರು: ದರ್ಶನ್ ಅಭಿಮಾನಿಗಳ ದುರ್ವರ್ತನೆ ವಿರುದ್ಧ ನಟ ಪ್ರಥಮ್ ಮತ್ತು ರಮ್ಯಾ ಅವರು ದೂರು ದಾಖಲಿಸಿದ್ದಾರೆ. ಪ್ರಥಮ್ ಅಂತೂ ತಾಳ್ಮೆ ಕಳೆದುಕೊಂಡು ದರ್ಶನ್ ವಿರುದ್ಧವೂ ಏಕವಚನದ ವಾಗ್ದಾಳಿ ಮಾಡುತ್ತಿದ್ದಾರೆ.
ಈ ನಡುವೆ ಸ್ಯಾಂಡಲ್ ವುಡ್ ಹೊಸ ಬದಲಾವಣೆಗೆ ಸಾಕ್ಷಿಯಾಗಿದೆ. ಇಬ್ಬರು ಸ್ಟಾರ್ ನಟರ ನಡುವಿನ ವೈಮನಸ್ಸು ಶಮನ ಆಗಿರುವ ಸೂಚನೆ ಕಂಡುಬಂದಿದೆ. I stand with Darshan sir ಎಂದು ಹೇಳುವ ಮೂಲಕ ದರ್ಶನ್ ಬೆಂಬಲಕ್ಕೆ ಧ್ರುವ ಸರ್ಜಾ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 'ಸು ಫ್ರಂ ಸೋ’ ಸಿನಿಮಾ ವೀಕ್ಷಿಸಿದ ಧ್ರುವ ಸರ್ಜಾ, ಈ ವಿಷಯದ ಬಗ್ಗೆಯೂ ಮಾತನಾಡಿ, ರಮ್ಯಾ ಪರವಾಗಿ ನಾನು ನಿಲ್ತೇನೆ ಅವರ ನಡೆ ಸರಿಯಿದೆ. ಆದರೆ ಪ್ರಥಮ್ ವಿಷಯದಲ್ಲಿ ದರ್ಶನ್ ಪರ ನಿಲ್ಲುತ್ತೇನೆ. ಪ್ರಥಮ್ ಮಾತುಗಳು ತುಸು ಅತಿಯಾದವು ಎಂದಿದ್ದಾರೆ.
ತಮ್ಮದೇ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಥಮ್ ವಿರುದ್ಧವೇ ಧ್ರುವ ಮಾತನಾಡಿದ್ದಾರೆ. ಈ ಮೂಲಕ ದರ್ಶನ್ ಪರ ಧ್ರುವ ಸರ್ಜಾ ಬ್ಯಾಟಿಂಗ್ ಮಾಡಿದ್ದಾರೆ. ದರ್ಶನ್ ಫ್ಯಾನ್ಸ್ ಎನ್ನಲಾದ ವ್ಯಕ್ತಿಗಳಿಂದ ಜೀವಬೆದರಿಕೆ ಇದೆ ಎಂದು ದೂರು ದಾಖಲಿಸಿರುವ ಪ್ರಥಮ್ ದರ್ಶನ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಪ್ರಥಮ್ ಹೇಳಿಕೆ ತಪ್ಪೆಂದು ಖಡಕ್ಕಾಗಿ ಹೇಳಿದ್ದಾರೆ ಧ್ರುವ ಸರ್ಜಾ.
ಈ ಮೊದಲು ಆಪ್ತರಾಗಿದ್ದ ದರ್ಶನ್, ಧ್ರುವ ನಡುವೆ ವೈಯಕ್ತಿಕ ವಿಚಾರಕ್ಕೆ ಮುನಿಸು ಉಂಟಾಗಿತ್ತು. ಈ ವಿಚಾರ ಅಧಿಕೃತವಾಗಿ ಗೋಚರಿಸಿತ್ತು. ಇದೇ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾಗ ಧ್ರುವ ಕಟುವಾಗಿ ಮಾತನಾಡಿದ್ದರು. ಅದಕ್ಕೂ ಮುನ್ನವೇ ದರ್ಶನ್ ವಿಚಾರವಾಗಿ ತಮ್ಮದೇ ಹುಟ್ಟುಹಬ್ಬದ ದಿನ ನೇರವಾಗಿ ಆಕ್ರೋಶ ಹೊರಹಾಕಿದ್ದರು .