ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ದಳಪತಿ ವಿಜಯ್ ನಟನೆಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಕೊನೆಯ ಚಿತ್ರ 'ಜನ ನಾಯಗನ್'ನ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಈ ಘೋಷಣೆ ಮಾಡಿದ್ದು ಈಗ ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸುವುದಾಗಿ ಹೇಳಿದರು.
ನಾನು ಈಗ ಚಲನಚಿತ್ರಗಳಿಂದ ದೂರ ಸರಿದು ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸುತ್ತೇನೆ. ನನಗೆ ಒಂದೇ ಒಂದು ಮುಖ್ಯ ವಿಷಯವೆಂದರೇ ಜನರು ಚಿತ್ರಮಂದಿರಗಳಿಗೆ ಬಂದು ನನ್ನ ಪರವಾಗಿ ನಿಲ್ಲುತ್ತಾರೆ. ಅದಕ್ಕಾಗಿಯೇ ನಾನು ಮುಂದಿನ 30-33 ವರ್ಷಗಳ ಕಾಲ ಅವರ ಪರವಾಗಿ ನಿಲ್ಲಲು ಸಿದ್ಧನಿದ್ದೇನೆ. ಈ ಅಭಿಮಾನಿಗಳಿಗಾಗಿಯೇ ನಾನು ಸಿನೆಮಾದಿಂದ ದೂರ ಸರಿಯುತ್ತಿದ್ದೇನೆ ಎಂದು ಹೇಳಿದರು. 2024ರ ಫೆಬ್ರವರಿ 2ರಂದು ವಿಜಯ್ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಚನೆಯನ್ನು ಘೋಷಿಸಿದರು. ಆ ಸಮಯದಲ್ಲಿ, ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರು.
ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುವಾಗ ವಿಜಯ್ ಭಾವುಕರಾದರು. ಮೊದಲ ದಿನದಿಂದ ಇಲ್ಲಿಯವರೆಗೂ ನಾನು ಎಲ್ಲಾ ರೀತಿಯ ಟೀಕೆಗಳನ್ನು ಎದುರಿಸಿದ್ದೇನೆ. ಕಥೆ ಯಾವಾಗಲೂ ಹಾಗೆಯೇ ಇರುತ್ತದೆ. ಆದರೆ ಅಭಿಮಾನಿಗಳು 33 ವರ್ಷಗಳಿಂದ ನನ್ನೊಂದಿಗೆ ಬಂಡೆಯಂತೆ ನಿಂತರು. ನಾನು ಒಂದು ಸಣ್ಣ ಮರಳಿನ ಕೋಟೆಯನ್ನು ನಿರ್ಮಿಸಲು ಚಿತ್ರರಂಗಕ್ಕೆ ಬಂದಿದ್ದೇ. ಆದರೆ ನೀವು ನನಗೆ ಒಂದು ಅರಮನೆಯನ್ನು ಕೊಟ್ಟಿದ್ದೀರಿ. ಈಗ, ಈ ವಿಜಯ್ ಎತ್ತರವಾಗಿ ನಿಂತು ನನಗಾಗಿ ತುಂಬಾ ಮಾಡಿದ ಅಭಿಮಾನಿಗಳಿಗೆ ತನ್ನ ಋಣವನ್ನು ತೀರಿಸುತ್ತಾನೆ.
ವಿಜಯ್ ತಮ್ಮ ಕೊನೆಯ ಚಿತ್ರ ಜನ ನಾಯಗನ್ ಚಿತ್ರದ ದಳಪತಿ ಕಚಾರಿ ಹಾಡಿಗೆ ನೃತ್ಯ ಮಾಡಿದರು. ಚಿತ್ರದ ಸಂಪೂರ್ಣ ತಾರಾಬಳಗ ಮತ್ತು ತಂಡವು ಹಾಜರಿತ್ತು. ಪೂಜಾ ಹೆಗ್ಡೆ, ಪ್ರಿಯಾಮಣಿ, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, ಗೀತರಚನೆಕಾರ ವಿವೇಕ್, ನೃತ್ಯ ಸಂಯೋಜಕರು ಶೋಬಿ ಮಾಸ್ಟರ್ ಮತ್ತು ಶೇಖರ್ ಮಾಸ್ಟರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಈ ಚಿತ್ರವು 2026ರ ಜನವರಿ 9ರಂದು ಅದ್ಧೂರಿಯಾಗಿ ತೆರೆಕಾಣಲಿದೆ.
ದಳಪತಿ ವಿಜಯ್ ತಮ್ಮ 10ನೇ ವಯಸ್ಸಿನಲ್ಲಿ "ವೆಟ್ರಿ" (1984) ಎಂಬ ತಮಿಳು ಚಲನಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು 1992ರಲ್ಲಿ 18ನೇ ವಯಸ್ಸಿನಲ್ಲಿ ನಲೈಯ ತೀರ್ಪು ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. 41 ವರ್ಷಗಳ ವೃತ್ತಿಜೀವನದಲ್ಲಿ, ವಿಜಯ್ ಸುಮಾರು 80 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.