ಹಿಂದಿ ನಟ ವಿಜಯ್ ವರ್ಮಾ ಅವರನ್ನು ಹೋಲುವ ವಿಶ್ವಾಸ್ ಶಂಕರ್ ಇದೀಗ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸಹನಾ ಮೂರ್ತಿ ನಿರ್ದೇಶನದ ಇನೋಸೆಂಟ್ (Innocent) ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ರೋಸ್, ಲೀಡರ್ ಮತ್ತು ತ್ರಿವಿಕ್ರಮದಂತಹ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಸಹನಾ ಇದೀಗ ತಮ್ಮ ನಾಲ್ಕನೇ ನಿರ್ದೇಶನಕ್ಕೆ ಸಜ್ಜಾಗಲಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ.
ಹೈಕೋರ್ಟ್ನಲ್ಲಿ ವಕೀಲರಾಗಿದ್ದ ವಿಶ್ವಾಸ್ ಶಂಕರ್ ಅವರು ಇದೀಗ ನಟನೆಗೆ ಇಳಿದಿದ್ದಾರೆ. ವಕೀಲ ವೃತ್ತಿಯಿಂದ ಹಿಂದೆ ಸರಿದು ನಟನೆ ಬಗೆಗಿನ ತಮ್ಮ ಉತ್ಸಾಹದ ಕಡೆಗೆ ನಡೆಯುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಶಂಕರ್ ಅವರ ಪುತ್ರ ವಿಶ್ವಾಸ್ ಕೇವಲ ನಟನೆಯತ್ತ ಗಮನ ಹರಿಸುತ್ತಿಲ್ಲ. ಬದಲಿಗೆ ಚಿತ್ರ ನಿರ್ಮಾಣದತ್ತಲೂ ಗಮನ ಹರಿಸಿದ್ದಾರೆ. ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ಕೈಂಡ್ ಬ್ರದರ್ ಫಿಲ್ಮ್ಸ್ ಮೂಲಕ ಇನೋಸೆಂಟ್ಗೆ ಬೆಂಬಲ ನೀಡಲಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಕೂಡ ಅವರೇ ಮಾಡಲಿದ್ದಾರೆ. ವಿಶ್ವಾಸ್ ಅವರು ತಮ್ಮದೇ ಆದ ಆಡಿಯೋ ಲೇಬಲ್ ವಿಶ್ವಾಸ್ ಮ್ಯೂಸಿಕ್ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದಾರೆ.
ಇನೋಸೆಂಟ್ ಚಿತ್ರದಲ್ಲಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ನಾಯಕಿಯಾಗಿ ನಟಿಸಲಿದ್ದಾರೆ. ಮತ್ತೋರ್ವ ನಾಯಕಿ ಸೇರಿದಂತೆ ಚಿತ್ರದ ತಾರಾಗಣವನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ನಿರೀಕ್ಷೆಯಿದೆ. ಚಿತ್ರಕ್ಕೆ ಸಹನಾ ಮೂರ್ತಿ ಅವರ ಪ್ರಾಜೆಕ್ಟ್ಗಳಲ್ಲಿ ಈ ಹಿಂದೆ ಕೆಲಸ ಮಾಡಿದ ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣವಿದೆ.