ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಡಾ ವಿಷ್ಣುವರ್ಧನ್ ಕುಟುಂಬಸ್ಥರು  
ಸಿನಿಮಾ ಸುದ್ದಿ

ಡಾ. ವಿಷ್ಣು ಸ್ಮಾರಕಕ್ಕೆ ಅಭಿಮಾನ್ ಸ್ಟುಡಿಯೊದಲ್ಲಿ ಜಮೀನು ನೀಡಿ, ಕರ್ನಾಟಕ ರತ್ನ ಘೋಷಿಸಿ: ಸಿಎಂಗೆ ಕುಟುಂಬಸ್ಥರ ಮನವಿ

ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ್ದು, ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪತ್ರವನ್ನು ಬರೆದಿದ್ದರು.

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ಕೆಡವಿ ಹಾಕಿ ಭಾರೀ ವಿವಾದ ಉಂಟಾಗಿತ್ತು. ಈ ಸಂಬಂಧ ವಿಷ್ಣು ಅಭಿಮಾನಿಗಳು ಹಾಗೂ ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಕುಟುಂಬಕ್ಕೂ ಜಟಾಪಟಿ ನಡೆಯುತ್ತಲೇ ಇತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಇತ್ತೀಚೆಗೆ ಕೋರ್ಟ್ ಅನುಮತಿಯ ಮೇರೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕವನ್ನು ಉರುಳಿಸಲಾಗಿತ್ತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ್ದು, ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪತ್ರವನ್ನು ಬರೆದಿದ್ದರು.

ಇದೇ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವಿದೆ. ಅಭಿಮಾನಿಗಳು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ. ನಿನ್ನೆ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದರು.

ವಿಷ್ಣು ಕುಟುಂಬ ಮುಖ್ಯಮಂತ್ರಿಗಳ ಭೇಟಿ

ಇಂದು ಭಾರತಿ ವಿಷ್ಣುವರ್ಧನ್ ಅವರು ತಮ್ಮ ಅಳಿಯ ಅನಿರುದ್ಧ ಜೊತೆಗೆ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳಿಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಿ ಗೌರವ ಸೂಚಿಸುವುದಕ್ಕೆ 10 ಗುಂಟೆ ಜಾಗವನ್ನು ನೀಡಬೇಕಾಗಿ ಮತ್ತು ಮರಣೋತ್ತರವಾಗಿ ಕರ್ನಾಟಕ ರತ್ನ ಗೌರವ ನೀಡಬೇಕೆಂದು ಮನವಿ ಮಾಡಿ ಪತ್ರ ನೀಡಿದ್ದಾರೆ.

ಪ್ರಮುಖವಾಗಿ ಮೈಸೂರು ನಗರದಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸಿ ಕನ್ನಡದ ಹೃದಯದಲ್ಲಿ ವಿಷ್ಣುವರ್ಧನ್ ಅವರ ನೆನಪನ್ನು ಶಾಶ್ವತವಾಗಿ ಉಳಿಸಿರುವ ಕರ್ನಾಟಕ ಸರ್ಕಾರಕ್ಕೆ, ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಇದು ಲಕ್ಷಾಂತರ ಅಭಿಮಾನಿಗಳ ಹೆಮ್ಮೆಯ ವಿಷಯವಾಗಿದೆ.

ಆದರೆ, ಬೆಂಗಳೂರು ನಗರದಲ್ಲಿಯೂ ಸ್ಮಾರಕದ ಅಗತ್ಯವಿದೆ ಎಂಬ ಅಭಿಮಾನಿಗಳ ದೀರ್ಘಕಾಲದ ಬೇಡಿಕೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಡಾ.ವಿಷ್ಣುವರ್ಧನ್ ಅವರು ಬದುಕನ್ನು ರೂಪಿಸಿಕೊಂಡಿದ್ದೇ ಬೆಂಗಳೂರಿನಲ್ಲಿ. ಈ ಸ್ಥಳವು ಅಭಿಮಾನಿಗಳಿಗೆ ಅತ್ಯಂತ ಭಾವನಾತ್ಮಕ ನೆನಪಿನ ಸ್ಥಳವೂ ಆಗಿದೆ. ಏಕೆಂದರೆ, ಇಲ್ಲಿಯೇ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೇರವೇರಿದ್ದು. ಲಕ್ಷಾಂತರ ಅಭಿಮಾನಿಗಳು ಆಗಮಿಸಿ ತಮ್ಮ ಪ್ರೀತಿಯ ಕಲಾವಿದನಿಗೆ ಕಂಬನಿ ಮಿಡಿದಿದ್ದರು. ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಸರ್ಕಾರ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ನಾವು ಮನವಿ ಮಾಡಿಕೊಳ್ಳುವುದು ಏನೆಂದರೆ, ಅಭಿಮಾನ್ ಸ್ಟುಡಿಯೋ ವ್ಯಾಪ್ತಿಯಲ್ಲಿ ಕನಿಷ್ಠ 10 ಗುಂಟೆ ಜಾಗವನ್ನು ಮೀಸಲಿಟ್ಟು- ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ನೀಡಬೇಕೆಂದು ಕೋರುತ್ತೇವೆ. ಇದರಿಂದ ಅಭಿಮಾನಿಗಳ ಭಾವನೆಗಳಿಗೆ ನ್ಯಾಯವನ್ನು ದೊರಕಿಸುವ ಜತೆಗೆ- ಒಂದು ಶಾಶ್ವತ ಸಾಂಸ್ಕೃತಿಕ ಸ್ಮಾರಕವಾಗಿ ಉಳಿದು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದು ಸಿ.ಎಂ. ಸಿದ್ಧರಾಮಯ್ಯಗೆ ಸಲ್ಲಿಸಿದ ಪತ್ರದಲ್ಲಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ADR report: ದೇಶದಲ್ಲಿ ಶೇ. 47 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪ, ಬಿಲಿಯನೇರ್ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ, ಡಿಕೆಶಿ ಎಷ್ಟನೇ ಶ್ರೀಮಂತ?

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಭಾರತದ ಮೇಲಿನ 'ಸುಂಕಾಸ್ತ್ರ' ನಿರ್ಣಾಯಕ: US ಸುಪ್ರೀಂ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಾಹಿತಿ

SCROLL FOR NEXT