ಬೆಂಗಳೂರು: 8 ವರ್ಷಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವಾಪಸ್ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
15 ವರ್ಷಗಳ ಕಾಲ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ ಸಾಲ ಮಾಡಿಕೊಂಡು ತೀರಿಸಲಾಗದೇ ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಮಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ದಿನ ಊರು ಬಿಟ್ಟು ಹೋಗಲು ಕಾರಣ ಏನು ಎನ್ನುವುದನ್ನು ವಿವರಿಸಿದ್ದಾರೆ.
ನನ್ನಿಂದ ಎಷ್ಟೋ ಜನಕ್ಕೆ ತೊಂದರೆ ಆಗಿದೆ, ನೋವಾಗಿದೆ. ಅವರೆಲ್ಲರಿಗೂ ಕ್ಷಮೆ ಕೇಳುತ್ತೇನೆ ಎಂದು ಮಾತು ಆರಂಭಿಸಿದರು. ಇಂಜಿನಿಯರಿಂಗ್ ಮುಗಿಸಿ, ಅಸಿಸ್ಟಂಟ್ ಡೈರೆಕ್ಟರ್ ಆದ ನಂತರ ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡಿದೆ. ಮೊದಲ ಸಲ ಸಿನಿಮಾ ಮಾಡಿದಾಗ ಅಂದುಕೊಂಡ ರೀತಿಯಲ್ಲಿ ಕೈ ಹಿಡಿಯಲಿಲ್ಲ. ಸಿನಿಮಾ ನಿರ್ಮಾಣ ಮಾಡಿದೆ, ಡಿಸ್ಟ್ರಿಬ್ಯೂಷನ್ ಮಾಡಿದೆ, ಹೋಟೆಲ್ ಬಿಸ್ನೆಸ್ ಮಾಡಿದೆ. ಯಾವುದೂ ಕೈ ಹಿಡಿಯಲಿಲ್ಲ ಎಂದು ಮಲ್ಲಿಕಾರ್ಜುನ ಹೇಳಿದರು.
ನಂತರ ಅವರು ಹಲವು ವಿಷಯದಲ್ಲಿ ಮಲ್ಲಿಕಾರ್ಜುನ ಕೈ ಸುಟ್ಟುಕೊಂಡರು. ಅವರು ಮೈತುಂಬ ಸಾಲ ಮಾಡಿಕೊಂಡರು. ನಂತರ ಸಾಯುವ ನಿರ್ಧಾರಕ್ಕೂ ಬಂದರು. ಆದರೆ, ಸಾಯುವ ನಿರ್ಧಾರದಿಂದ ಅವರು ಹಿಂದೆ ಸರಿದರು. ಅಂದು ಕುಂದಾಪುರದಿಂದ ಹೊರಟು ಸವದತ್ತಿಗೆ ಬಂದೆ. ನನ್ನ ಗೆಳೆಯನ ಬಳಿ ಹಣ ಪಡೆದು ಕೊಲ್ಲಾಪುರ, ಸೊಲ್ಲಾಪುರ, ಉತ್ತರ ಭಾರತ ಸೇರಿದಂತೆ ಅನೇಕ ಕಡೆ ಸುತ್ತಾಡಿದೆ. ಹಲವು ಜಾಗದಲ್ಲಿ ಕೆಲವು ದಿನ ಇರ್ತಿದ್ದೆ, ಬಿಟ್ಟು ಹೋಗ್ತಿದ್ದೆ. ಹೋಟೆಲ್, ರೆಸಾರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.
ನನಗೆ ನೇಪಾಳದಲ್ಲಿ ಒಬ್ಬ ಗೆಳೆಯನಿದ್ದ. ಅವನ ಹೋಟೆಲ್ ಇತ್ತು. ಅಲ್ಲಿ ಸಾಕಷ್ಟು ಸಮಯ ಕಳೆದೆ. ನಾನು ಬದುಕಿದ್ದೀನಿ ಅಂತ ಪತ್ನಿಗೆ ಲೆಟರ್ ಬರೆದೆ. ತಾಯಿಗೂ ಬರೆದೆ. ಸತ್ಯ ಒಪ್ಪಿಕೊಳ್ಳಬೇಕು ಅಂತ ಅನಿಸಿತು. ತಂದೆ-ತಾಯಿ ತೀರಿದಾಗ ಬರೋಕೆ ಆಗಿಲ್ಲ. ಒಂದು ಹಿಡಿ ಮಣ್ಣು ಹಾಕೋಕೂ ಆಗಿಲ್ಲ. ಈಗ ನನಗೆ ತಪ್ಪಿತಸ್ಥ ಭಾವನೆ ಕಾಡುತ್ತಾ ಇತ್ತು ಎಂದು ಮಲ್ಲಿಕಾರ್ಜುನ ಹೇಳಿದರು.
ಒಂದಲ್ಲ ಒಂದು ದಿನ ಬರ್ತೀನಿ. ಯಾವಾಗ ಬರ್ತೀನಿ ಎನ್ನುವುದು ಗೊತ್ತಿಲ್ಲ, ಧೈರ್ಯವಾಗಿರಿ ಎಂದು ಹೇಳಿದ್ದೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಪೋಷಕರು, ನೆಂಟರು, ಸ್ನೇಹಿತರು ಎಲ್ಲರನ್ನು ಬಿಟ್ಟು 7 ವರ್ಷ ಅಜ್ಞಾತದಲ್ಲಿದ್ದೆ. ನಿನಗೆ ಸಾಡೆ ಸಾಥ್ ನಡೀತಿದೆ. ಬಹಳ ಕೆಟ್ಟದಾಗುತ್ತದೆ, ಎಚ್ಚರವಾಗಿರು ಎಂದು ಗುರುಗಳೊಬ್ಬರು ನನಗೆ ಹೇಳಿದ್ರು.. ಸಾಡೆ ಸಾಥ್ ಇದ್ದಾಗಲೇ ಊರುಬಿಟ್ಟೆ, ಈಗ 7 ವರ್ಷ ಕಳೆದಿದೆ. ಈ ಸಾಡೆ ಸಾಥ್ ಮುಗಿದಿದೆ.
ನನ್ನೂರಿಗೆ ಬರಬೇಕು, ಸಾಲ ತೀರಿಸಬೇಕು ಅನಿಸಿತು. ನನ್ನ ಕಷ್ಟ ಹೇಳಿಕೊಂಡರೆ ಅವಕಾಶ ಕೊಡ್ತಾರೆ, ಸೆಕೆಂಡ್ ಇನ್ನಿಂಗ್ಸ್ ಆರಂಭಿಸಬೇಕು, ಸಾಧ್ಯವಾದಷ್ಟು ಸಾಲ ವಾಪಸ್ ಕೊಡೋಣ, ನಾನು ಊರು ಬಿಟ್ಟು ಹೋಗಿದ್ದು ತಪ್ಪು ಎಂದು ಗೊತ್ತಾಯ್ತು. ಒಂದೂವರೆ ವರ್ಷದಿಂದ ನಮ್ಮ ಮನೆಯವರ ಸಂಪರ್ಕಕ್ಕೆ ಬಂದೆ. ಇದೇ ಸಮಯದಲ್ಲಿ ದರ್ಶನ್ ಸರ್ ಅವರ ವಿಚಾರ ಗೊತ್ತಾಯಿತು. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಗೊತ್ತಾಯ್ತು. ಈ ನಡುವೆ ಎರಡ್ಮೂರು ಶಸ್ತ್ರಚಿಕಿತ್ಸೆ ನಡೆದು ಬಹಳ ನೋವುಪಟ್ಟೆ.
ಈ ನಡುವೆ ಅರ್ಜುನ್ ಸರ್ಜಾ ಅವರ ಕೇಸ್ ಇತ್ತು. ಅರ್ಜುನ್ ಸರ್ಜಾ ಅವರಿಗೆ ಚೆಕ್ ಕೊಟ್ಟಿದ್ದೆ, ಅದು ಬೌನ್ಸ್ ಆಗಿ ಸರ್ಚ್ ವಾರೆಂಟ್ ಇಶ್ಯೂ ಆಗಿತ್ತು. ಹಾಗಾಗಿ ಬೇಲ್ ಪಡೆಯಬೇಕಿತ್ತು. ಕಳೆದ ವರ್ಷ ಮೇ 29ಕ್ಕೇ ಬೇಲ್ ಸಿಕ್ತು. ಆಗ ಬೆಂಗಳೂರಿಗೆ ಬಂದು ಹೋದೆ. ದಿನಕರ್ ಅವರನ್ನು ಭೇಟಿ ಮಾಡಿದ್ದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ಸಾಲ ಕೊಟ್ಟ ಎಲ್ಲರ ಮನೆಗೆ ಹೋಗಿ ಗಂಟೆಗಟ್ಟಲೆ ಮಾತನಾಡಿದ್ದೀನಿ. ಸಾಲ ವಾಪಸ್ ಕೊಡ್ತೀನಿ ಎಂದು ಹೇಳಿಬಂದಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.