ಬೆಂಗಳೂರು: ಕನ್ನಡ ಚಿತ್ರರಂಗದ ‘ನಾದಬ್ರಹ್ಮ’ ಎಂದೇ ಕರೆಯಲ್ಪಡುವ ಖ್ಯಾತ ಗೀತರಚನೆಕಾರ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಗುರುವಾರ ಹೊರಡಿಸಲಾದ ಸರ್ಕಾರದ ಆದೇಶದಲ್ಲಿ ಮಾಹಿತಿ ನೀಡಲಾಗಿದೆ. ಪ್ರಶಸ್ತಿ ಆಯ್ಕೆಗಾಗಿ ರಚಿಸಲಾದ ಆಯ್ಕೆ ಸಮಿತಿ ಸಭೆ ನಡೆಸಿ, ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿರುವ ಮೂರು ಗಣ್ಯ ವ್ಯಕ್ತಿಗಳನ್ನು ಏಕಮತದಿಂದ ಶಿಫಾರಸು ಮಾಡಿತ್ತು. ಈ ಶಿಫಾರಸುಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಸರ್ಕಾರಕ್ಕೆ ಸಲ್ಲಿಸಿ, ಅಂತಿಮ ಅನುಮೋದನೆ ಕೋರಿದ್ದರು.
ಪ್ರಸ್ತಾವನೆ ಪರಿಶೀಲಿಸಿದ ನಂತರ, ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಅವರು ಗೀತರಚನೆಕಾರರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ನೀಡಿರುವ ಅಪಾರ ಮತ್ತು ದೀರ್ಘಕಾಲಿಕ ಕೊಡುಗೆಯನ್ನು ಪರಿಗಣಿಸಿ, ಅವರನ್ನು ಜೀವಮಾನ ಸಾಧನಾ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
BIFFESನಲ್ಲಿ ಪ್ರದಾನ ಮಾಡಲಾಗುವ ಜೀವಮಾನ ಸಾಧನಾ ಪ್ರಶಸ್ತಿ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ಚಲನಚಿತ್ರ ಕ್ಷೇತ್ರದ ಬೆಳವಣಿಗೆ ಮತ್ತು ಶ್ರೀಮಂತಿಕೆಗೆ ಮಹತ್ವದ ಪಾತ್ರ ವಹಿಸಿದ ಸಾಧಕರನ್ನು ಗೌರವಿಸುತ್ತದೆ.biffes
ಹಂಸಲೇಖ ಅವರು ಸಂಗೀತ ನಿರ್ದೇಶನಕ್ಕೆ ಸೀಮಿತವಾಗದೆ ಗೀತ ರಚನೆ, ಚಿತ್ರಕಥೆ, ಸಂಭಾವನೆ ಹಾಗೂ ನಿರ್ದೇಶನದಲ್ಲೂ ಯಶಸ್ಸು ಕಂಡವರು. 80 ಮತ್ತು 90ರ ದಶಕದಲ್ಲಿ ಜಾನಪದ ಸೊಗಡನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಸಮ್ಮಿಲನಗೊಳಿಸಿ, ಕನ್ನಡ ಸಿನಿರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು. ಈ ಹಿನ್ನೆಲೆಯಲ್ಲಿ ಅವರಿಗೆ ದೊರೆತ ಈ ಗೌರವವನ್ನು ಚಿತ್ರರಂಗದ ವಲಯದಲ್ಲಿ ಮಹತ್ವದ ಮಾನ್ಯತೆಯಾಗಿ ಪರಿಗಣಿಸಲಾಗಿದೆ.