ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ, ಗೀತರಚನೆಕಾರ ಹಾಗೂ ಸಾಹಿತಿ, ನಾದ ಬ್ರಹ್ಮ ಹಂಸಲೇಖ ಅವರಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ನಿಟ್ಟಿನಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಸಾರ್ವಜನಿಕ ಅಭಿಯಾನ ಶುರು ಮಾಡಿದ್ದಾರೆ. ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಮತ್ತು ಸಾಹಿತ್ಯ ನೀಡಿರುವ ಅಪರೂಪದ ಸಾಧನೆಯನ್ನು ಮಾಡಿದ ಕನ್ನಡಿಗ ಎಂಬ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಈ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಮನವಿ ಮಾಡಿರುವ ಅವರು, ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎಂಬುದರ ಕುರಿತು ಅಭಿಯಾನ ಶುರು ಮಾಡಿದ್ದೇನೆ. ಹಾಗಾಗಿ ಕನ್ನಡ ಚಿತ್ರರಂಗ, ಸಾಹಿತ್ಯಗಳು, ಕನ್ನಡ ಚಿತ್ರಪ್ರೇಮಿಗಳು, ಮಾಧ್ಯಮದವರಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಭಾರತ ಕೇಂದ್ರ ಸರ್ಕಾರಕ್ಕೆ ಮನವಿ ಎಂದು ಬರೆದುಕೊಂಡಿದ್ದಾರೆ.
300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇಬೇಕಾದ ಗೌರವ. ಈ ಅಭಿಯಾನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಮನವಿ ಮಾಡಿದ್ದಾರೆ.
ಪ್ರೇಮ್ ತಮ್ಮ ಮನವಿಯಲ್ಲಿ, ಹಂಸಲೇಖ ಅವರ ಸಾಧನೆ ಕೇವಲ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಬೇಕಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠದಂತಹ ಅತ್ಯುನ್ನತ ಗೌರವ ಲಭಿಸಬೇಕು ಎಂಬುದು ಕನ್ನಡಿಗರ ಒಗ್ಗಟ್ಟಿನ ಬೇಡಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಅಭಿಯಾನಕ್ಕೆ ಚಿತ್ರರಂಗದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಸಾಹಿತಿಗಳು, ಸಂಗೀತಾಸಕ್ತರು ಹಾಗೂ ಕನ್ನಡಾಭಿಮಾನಿಗಳು ವ್ಯಾಪಕ ಬೆಂಬಲ ನೀಡಬೇಕೆಂದು ಪ್ರೇಮ್ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಅವರು ಕರೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅದ್ಭುತ ಸಾಧಕರಾಗಿರುವ ಹಂಸಲೇಖ ಅವರಿಗೆ 1995 ರಲ್ಲಿ ‘ಪಂಚಾಕ್ಷರಿ ಗವಾಯಿ’ ಸಿನಿಮಾದ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ದೊರಕಿದೆ. ‘ಹಾಲುಂಡ ತವರು’, ‘ನೆನಪಿರಲಿ’ ‘ಪಂಚಾಕ್ಷರಿ ಗವಾಯಿ’ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಗಳು ದೊರಕಿದೆ. ಹಲವು ಬಾರಿ ಫಿಲಂ ಫೇರ್ ದೊರಕಿದೆ. ಇವು ಹಂಸಲೇಖ ಅವರು ಪ್ರತಿಭೆಯಿಂದ ಗೆದ್ದಿರುವ ಪ್ರಶಸ್ತಿಗಳು. ಇವುಗಳ ಹೊರತಾಗಿ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಎಸ್ ಜಾನಕಿ ಪ್ರಶಸ್ತಿಗಳು ದೊರಕಿವೆ. ಆದರೆ ಕೇಂದ್ರದಿಂದ ನಾಗರೀಕ ಪ್ರಶಸ್ತಿಗಳು ಈ ವರೆಗೆ ಅವರಿಗೆ ದೊರಕಿಲ್ಲ.
ಕೇಂದ್ರ ಸರ್ಕಾರವು ಹಂಸಲೇಖ ಅವರ ಸಾಧನೆಯನ್ನು ಈ ವರೆಗೆ ಗುರುತಿಸಿಲ್ಲ. ಹೀಗಾಗಿ ನೆನಪಿರಲಿ ಪ್ರೇಮ್ ಆರಂಭಿಸಿರುವ ಈ ಅಭಿಯಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಹಂಸಲೇಖ ಅಭಿಮಾನಿಗಳು ಸೇರಿದಂತೆ ಕನ್ನಡಪರ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸುತ್ತಿವೆ.