ಪಾರುಲ್ ಯಾದವ್ ದೀರ್ಘ ವಿರಾಮದ ನಂತರ ಕನ್ನಡ ಚಿತ್ರರಂಗಕ್ಕೆ ಮರಳಲಿದ್ದಾರೆ ಮತ್ತು ಅವರು ನಿರ್ದೇಶಕ ಪನ್ನಗ ಭರಣ ಅವರ ಮುಂದಿನ ಕಾಮಿಡಿ ಎಂಟರ್ಟೈನರ್ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್, ನಟ ಸುಮುಖ ಮತ್ತು ನಟಿ ಶ್ರುತಿ ಹರಿಹರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕುರಿತು ಇನ್ನೂ ಅಧಿಕೃತ ಘೋಷಣೆ ಮಾಡದಿದ್ದರೂ, ತಂಡ ಈಗಾಗಲೇ ಮಾರಿಷಸ್ನಲ್ಲಿ ಒಂದು ತಿಂಗಳ ಚಿತ್ರೀಕರಣ ಪೂರ್ಣಗೊಳಿಸಿದೆ ಎಂದು ಸಿನಿಮಾ ಎಕ್ಸ್ಪ್ರೆಸ್ಗೆ ತಿಳಿದು ಬಂದಿದೆ. ಇನ್ನೂ ಕೆಲವು ನಿರ್ಣಾಯಕ ಭಾಗಗಳ ಚಿತ್ರೀಕರಣ ಬಾಕಿ ಇದೆ, ಮತ್ತು ಸದ್ಯ ಬೇರೆ ಅಂತರರಾಷ್ಟ್ರೀಯ ಸ್ಥಳವನ್ನು ಹುಡುಕುತ್ತಿದ್ದು, ಅದನ್ನು ಮುಗಿಸುವುದಾಗಿ ಚಿತ್ರತಂಡ ಘೋಷಿಸಿದೆ.
ನಟ ಕೋಮಲ್ ನಟನೆಯ 'ಗೋವಿಂದಾಯ ನಮಃ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಾರುಲ್ ಅವರು, ಬಚ್ಚನ್, ಕಿಲ್ಲಿಂಗ್ ವೀರಪ್ಪನ್, ಉಪ್ಪಿ 2 ಮತ್ತು ಜೆಸ್ಸಿಯಂತಹ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದರು. ಕೊನೆಯದಾಗಿ ಅವರು ಸೀಜರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ವೀನ್ ಚಿತ್ರದ ಕನ್ನಡ ರಿಮೇಕ್ 'ಬಟರ್ಫ್ಲೈ' ಚಿತ್ರದಲ್ಲಿಯೂ ಅವರು ನಟಿಸಿದ್ದು, ಅದಿನ್ನು ಬಿಡುಗಡೆಯಾಗಿಲ್ಲ.
ಕೊನೆಯದಾಗಿ 'ನಿದ್ರಾದೇವಿ ನೆಕ್ಸ್ಟ್ ಡೋರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮತ್ತು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ರುತಿ ಹರಿಹರನ್ ಇದೀಗ ಸದ್ಯ ನಿರ್ಮಾಣ ಹಂತದಲ್ಲಿರುವ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ.
ಯೋಗರಾಜ್ ಭಟ್ ಅವರ 'ಮನದ ಕಡಲು' ಚಿತ್ರದ ನಂತರ ಸುಮುಖ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಮಧ್ಯೆ, ಕಾರ್ತಿಕ್ ಮಹೇಶ್ ಕೀರ್ತಿ ಕೃಷ್ಣ ಅವರ ಸೀತಾ ರಾಮ ರಾಜು ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.
ಉಳಿದ ಭಾಗಗಳ ಚಿತ್ರೀಕರಣ ಪೂರ್ಣಗೊಂಡ ನಂತರವೇ ಪನ್ನಗ ಭರಣ ಅವರು ಈ ಯೋಜನೆಯನ್ನು ಅಧಿಕೃತವಾಗಿ ಅನಾವರಣಗೊಳಿಸುವ ನಿರೀಕ್ಷೆಯಿದೆ.