ಬೆಂಗಳೂರು: ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಖ್ಯಾತ ಹೋಟೆಲ್ನಲ್ಲಿ ನಡೆದ ಈ ಸಮಾರಂಭವು ಪೂಜೆಯೊಂದಿಗೆ ಆರಂಭಗೊಂಡಿತು. ಈ ಪೂಜೆಯಲ್ಲಿ ವಧು-ವರರ ಕುಟುಂಬದ ಆಪ್ತ ಸದಸ್ಯರು ಮಾತ್ರ ಭಾಗವಹಿಸಿದ್ದರು. ಸಮಾರಂಭವನ್ನು ಸಂಪೂರ್ಣ ಖಾಸಗಿಯಾಗಿ ನಡೆಸಲು ನಿರ್ಧರಿಸಿದ್ದ ಜೋಡಿ, ಮಾಧ್ಯಮಗಳ ಪ್ರವೇಶಕ್ಕೂ ಅವಕಾಶ ನೀಡಿರಲಿಲ್ಲ.
ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋ ಹಂಚಿಕೊಳ್ಳಲಾಗಿದ್ದು, ಶರ್ಮಿಳಾ ಮತ್ತು ಸುಧನ್ ಸುಂದರಂ ಪರಸ್ಪರ ಉಂಗುರ ಬದಲಾಯಿಸಿಕೊಂಡ ಫೋಟೋ ಹಂಚಿಕೊಂಡಿದ್ದಾರೆ.
ನಿಶ್ಚಿತಾರ್ಥ ಸಮಾರಂಭದಲ್ಲಿ ಶರ್ಮಿಳಾ ಮತ್ತು ಸುಧನ್ ಇಬ್ಬರೂ ಐವರಿ (ಬಿಳಿ-ಕ್ರೀಮ್) ಬಣ್ಣದ ಉಡುಪುಗಳಲ್ಲಿ ಕಾಣಿಸಿಕೊಂಡು ಸರಳತೆ ಹಾಗೂ ಸೊಬಗಿನಿಂದ ಗಮನ ಸೆಳೆದರು.
ನಿಶ್ಚಿತಾರ್ಥದ ಬಳಿಕ ಮದುವೆಯ ಸಿದ್ಧತೆಗಳು ಆರಂಭವಾಗಿದ್ದು, ಮದುವೆಯ ದಿನಾಂಕ ಹಾಗೂ ಸ್ಥಳವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
"ಇದು ಡೆಸ್ಟಿನೇಶನ್ ವೆಡ್ಡಿಂಗ್ ಆಗಿರಲಿದೆ. ಸುಂದರ, ಕನಸಿನಂತಿರುವ ಹಾಗೂ ಶೈಲಿಯುತ ಮದುವೆಯಾಗಬೇಕು ಎಂಬುದು ಶರ್ಮಿಯೆಲಾ ಅವರ ಆಸೆ" ಎಂದು ದಂಪತಿಗೆ ಆಪ್ತವಾಗಿರುವ ಮೂಲಗಳು ತಿಳಿಸಿವೆ.
ಕೆಲವೇ ದಿನಗಳ ಹಿಂದೆ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿರುವುದಾಗಿ ಶರ್ಮಿಳಾ ಮಾಂಡ್ರೆ ತಿಳಿಸಿದ್ದರು. "ನಾವು ಕೆಲ ಸಮಯದಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದೇವೆ. ಈಗ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದೇವೆ" ಎಂದು ಅವರು ಹೇಳಿದ್ದರು.