ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಾಯ ಉಂಟಾಗಿದೆ. ಗಲ್ಫ್ ರಾಷ್ಟ್ರಗಳ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಅನೇಕರ ಕನ್ನಡಿಗರು ಈಗ ಸಂಕಷ್ಟದಲ್ಲಿದ್ದಾರೆ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ದಾಳಿ ನಡೆಸುತ್ತಿದ್ದು, ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ದುಬೈನಲ್ಲಿರೋ ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಡ್ರೋನ್ ಪ್ರತಾಪ್ ಅವರು ಸದ್ಯ ಈಚೆಗೆ ದುಬೈಗೆ ಹೋಗಿದ್ದರು. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಫೆ.28ರಂದು ಅವರು ಬೆಂಗಳೂರಿಗೆ ವಾಪಸಾಗಬೇಕಿತ್ತು. ಅಷ್ಟರೊಳಗೆ ಯುದ್ಧದ ಕರಿನೆರಳು ಆವರಿಸಿಕೊಂಡಿತ್ತು. ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ಗಲ್ಫ್ ರಾಷ್ಟ್ರಗಳ ವಿಮಾನ ನಿಲ್ದಾಣಗಳು ಸ್ತಬ್ಧಗೊಂಡಿವೆ.
ನಾನು ಈಗ ಅಬುಧಾಬಿ ಏರ್ಪೋರ್ಟ್ನಲ್ಲಿ ಇದ್ದೇನೆ. ಇರಾನ್ ಮತ್ತು ಅಮೆರಿಕದ ಯುದ್ಧದ ಮಧ್ಯೆ ನಾವಿಲ್ಲಿ ಸಿಲುಕಿಕೊಂಡಿದ್ದೇವೆ. ನಾವು ಇಂದು ರಾತ್ರಿ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಎಲ್ಲಾ ವಿಮಾನಗಳು ಕ್ಯಾನ್ಸಲ್ ಆಗಿವೆ. ಏನು ಮಾಡಬೇಕು ಎಂದು ನಮಗೆ ತಿಳಿಯುತ್ತಿಲ್ಲ.
ಇರಾನ್ ಮತ್ತು ಅಮೆರಿಕ ಯುದ್ಧ ಮಾಡುತ್ತಿರುವುದರಿಂದ ಇಲ್ಲಿನ ಏರ್ಸ್ಪೇಸ್ ಅನ್ನು ಕಂಪ್ಲೀಟ್ ಆಗಿ ಕ್ಲೋಸ್ ಮಾಡಿದ್ದಾರೆ. ನಾವೀಗ ಏರ್ಪೋರ್ಟ್ನಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆ ಇದೆ. ಮುಂದಿನ ಅಪ್ಡೇಟ್ಗಾಗಿ ಕಾಯಿರಿ ಅಂತಲೂ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಅನೌನ್ಸ್ಮೆಂಟ್ ಮಾಡುತ್ತಿದ್ದಾರೆ" ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.
ಇನ್ನು, ಬುರ್ಜ್ ಖಲೀಫಾ ಸಮೀಪ ನಿಂತು ವಿಡಿಯೋ ಮಾಡಿರುವ ಪ್ರತಾಪ್ ಅಲ್ಲಿನ ಪರಿಸ್ಥಿತಿ ಸಾಮಾನ್ಯ ದಿನಗಳಂತೆಯೇ ಇದೆ. ಆದರೆ, ಯುದ್ಧದ ಕಾರ್ಮೋಡದ ಆತಂಕ ಜನರಲ್ಲಿದೆ. ರಸ್ತೆಗಳಲ್ಲಿ ವಾಹನ ಸಂಚಾರ, ಸಾರ್ವಜನಿಕರ ಒಡಾಟ ಎಲ್ಲವೂ ಯಥಾಸ್ಥಿತಿಯಲ್ಲಿದೆ. ಸದ್ಯಕ್ಕೆ ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ.
ಒಂದೆರಡು ದಿನಗಳಲ್ಲಿ ವಿಮಾನ ಸಂಚಾರ ಪುನಾರಂಭಗೊಳ್ಳುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅನಗತ್ಯ ಗೊಂದಲ, ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ಅಂಥವರ ವಿರುದ್ಧ ಇರಾನ್ ಸರ್ಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.